Friday, July 24, 2026
Join WhatsApp Group
HomeCrimeನಕಲಿ ಸ್ಕ್ರೀನ್‌ಶಾಟ್‌ ಕಳಿಸುತ್ತ ಹೋಟೆಲ್‌ನಲ್ಲಿ 5 ತಿಂಗಳು ಉಳಿದ!

ನಕಲಿ ಸ್ಕ್ರೀನ್‌ಶಾಟ್‌ ಕಳಿಸುತ್ತ ಹೋಟೆಲ್‌ನಲ್ಲಿ 5 ತಿಂಗಳು ಉಳಿದ!

ಗುರುಗ್ರಾಮ್‌ನಲ್ಲಿ ಅಚ್ಚರಿಯ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. 26 ವರ್ಷದ ಯುವಕನೊಬ್ಬ ಸುಮಾರು ಐದು ತಿಂಗಳು ಹೋಟೆಲ್‌ನಲ್ಲಿ ವಾಸ್ತವ್ಯ ಮಾಡಿ, 6 ಲಕ್ಷಕ್ಕೂ ಅಧಿಕ ಬಿಲ್‌ ಕಟ್ಟದೇ ನಕಲಿ ಆನ್‌ಲೈನ್‌ ಪಾವತಿ ಸ್ಕ್ರೀನ್‌ಶಾಟ್‌ಗಳನ್ನು ಕಳುಹಿಸಿ ಹೋಟೆಲ್‌ನವರಿಗೇ ಮಂಕುಬೂದಿ ಎರಚಿದ್ದಾನೆ!

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಯನ್ನು ಹಿಮಾಂಶು ಎಂದು ಗುರುತಿಸಲಾಗಿದೆ. ಹರಿಯಾಣದ ಸೋಹ್ನಾ ಮೂಲದ ಈತ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಒಂದು ಆಪ್‌ನಲ್ಲಿ ಯೂಟ್ಯೂಬ್‌ ಚಾನೆಲ್‌ ಪ್ರಚಾರ ಕೆಲಸ ಮಾಡುತ್ತಿದ್ದ.

ಅಕ್ಟೋಬರ್ 2025ರಿಂದ ಫೆಬ್ರವರಿ 2026ರವರೆಗೆ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯ ಡಿಎಲ್ಎಫ್ ಫೇಸ್ 5 ಪ್ರದೇಶದ ಹೋಟೆಲ್‌ನಲ್ಲಿ ಈತ ವಾಸ್ತವ್ಯ ಮಾಡುತ್ತಿದ್ದ. ಈ ಅವಧಿಯಲ್ಲಿ ಒಟ್ಟು 6.17 ಲಕ್ಷ ರೂ ಬಿಲ್ ಬಾಕಿ ಉಳಿದಿತ್ತು.

ಆರೋಪಿಯು ಹೋಟೆಲ್‌ ನಿರ್ವಾಹಕರಿಗೆ ಒಟ್ಟು 16 ಬಾರಿ ಆನ್‌ಲೈನ್‌ ಪಾವತಿ ಮಾಡಿದಂತೆ ತೋರಿಸುವ ಸ್ಕ್ರೀನ್‌ಶಾಟ್‌ಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದ. ಆದರೆ ಅವುಗಳೆಲ್ಲವೂ ನಕಲಿ ಎಂದು ನಂತರ ತಿಳಿದುಬಂದಿದೆ.

ಪೊಲೀಸರ ಪ್ರಕಾರ, ಯೂಟ್ಯೂಬ್‌ನಲ್ಲಿ ಕಂಡ ಒಂದು ವೀಡಿಯೊ ಆಧಾರವಾಗಿ ಹಿಮಾಂಶು ನಕಲಿ ಪಾವತಿ ಆಪ್ ಡೌನ್‌ಲೋಡ್ ಮಾಡಿಕೊಂಡಿದ್ದ. ಆ ಆಪ್‌ನಲ್ಲಿ ಕ್ಯೂಆರ್ ಸ್ಕ್ಯಾನರ್ ಮಾತ್ರ ಕೆಲಸ ಮಾಡುತ್ತಿತ್ತು, ಉಳಿದ ವೈಶಿಷ್ಟ್ಯಗಳು ನಿಷ್ಕ್ರಿಯವಾಗಿದ್ದವು. ಪಾವತಿ ಮಾಡಿದಂತೆ ತೋರಿಸುವ ಡಮ್ಮಿ ಸ್ಕ್ರೀನ್‌ಶಾಟ್‌ಗಳನ್ನು ಸೃಷ್ಟಿಸಿ, ಹಣ ಜಮೆಯಾಗಿದೆಯೆಂಬ ಭ್ರಮೆ ಮೂಡಿಸಿದ್ದ.

ಹೋಟೆಲ್‌ ನಿರ್ವಾಹಕ ತಮ್ಮ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಯಾವುದೇ ಹಣ ಜಮೆಯಾಗಿಲ್ಲವೆಂದು ಕಂಡುಬಂದಿತು. ಆರೋಪಿಯಿಂದ ಬ್ಯಾಂಕ್ ಸ್ಟೇಟ್‌ಮೆಂಟ್ ಕೇಳಿದಾಗ ನೀಡಲು ನಿರಾಕರಿಸಿ, ಫೆಬ್ರವರಿ 24ರಂದು ಹೋಟೆಲ್‌ ತೊರೆದಿದ್ದಾನೆ ಎನ್ನಲಾಗಿದೆ.

ಇದರಿಂದ ಅನುಮಾನಗೊಂಡ ನಿರ್ವಾಹಕರು ಸೆಕ್ಟರ್ 53 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇನ್ನಷ್ಟು ಅಂಶಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೇ ರೀತಿಯ ನಕಲಿ ಪಾವತಿ ಆಪ್‌ಗಳ ಬಳಕೆಯಿಂದ ಮತ್ತಷ್ಟು ವಂಚನೆಗಳು ನಡೆದಿವೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ಡಿಜಿಟಲ್ ಪಾವತಿಗಳ ಯುಗದಲ್ಲಿ ಇಂತಹ ವಂಚನೆಗಳು ಎಚ್ಚರಿಕೆಯ ಘಂಟೆಯಾಗಿದೆ. ಹಣ ಜಮೆಯಾದ ದೃಢೀಕರಣಕ್ಕಾಗಿ ಕೇವಲ ಸ್ಕ್ರೀನ್‌ಶಾಟ್‌ಗಳ ಮೇಲೆ ನಂಬಿಕೆ ಇಡದೆ, ಬ್ಯಾಂಕ್ ಖಾತೆ ಪರಿಶೀಲನೆ ಮಾಡುವುದು ಅಗತ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.

canara next – ಸುದ್ದಿಯಷ್ಟೇ ಅಲ್ಲ, ಜನರ ಧ್ವನಿ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share