Saturday, May 30, 2026
HomeCrimeನಡು ರಸ್ತೆಯಲ್ಲೇ ಕಾಂಗ್ರೆಸ್‌ ಮುಖಂಡನ ಹ*ತ್ಯೆಗೆ ಸಂಚು!

ನಡು ರಸ್ತೆಯಲ್ಲೇ ಕಾಂಗ್ರೆಸ್‌ ಮುಖಂಡನ ಹ*ತ್ಯೆಗೆ ಸಂಚು!

ಅಂಕೋಲಾ: ತಾಲೂಕಿನ ಮೀನು ಮಾರ್ಕೆಟ್ ಸಮೀಪ ಬುಧವಾರ ಬೆಳಿಗ್ಗೆ ನಡೆದ ಭೀಕರ ದಾಳಿ ಪ್ರಕರಣ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಅಪರಿಚಿತರು ಉದ್ಯಮಿ, ಕಾಂಗ್ರೆಸ್‌ ಮುಖಂಡ ಗೋಪಾಲಕೃಷ್ಣ ನಾಯಕ (46) ಅವರ ಮೇಲೆ ಗುಂಪಾಗಿ ದಾಳಿ ನಡೆಸಿ ಹತ್ಯೆ ಪ್ರಯತ್ನ ನಡೆಸಿದ್ದಾರೆ.

ಹಿಚ್ಕಡ ನಿವಾಸಿ ರಾಘವೇಂದ್ರ ನಾಯಕ (43) ನೀಡಿದ ದೂರಿನ ಪ್ರಕಾರ, ಅವರು ತಮ್ಮ ಪರಿಚಿತ, ಉದ್ಯಮಿ ಗೋಪಾಲಕೃಷ್ಣ ನಾಯಕ (46) ಅವರೊಂದಿಗೆ ಮೀನು ಮಾರ್ಕೆಟ್‌ಗೆ ತೆರಳಿದ್ದರು. ನಂತರ ಗೋಪಾಲಕೃಷ್ಣ ಅವರು ಕಾರವಾರ ರಸ್ತೆಯಲ್ಲಿರುವ ಸೆಲೂನ್‌ಗೆ ಹೋಗಿದ್ದರು.

ಬೆಳಿಗ್ಗೆ ಸುಮಾರು 10:15ರ ವೇಳೆಗೆ ಗೋಪಾಲಕೃಷ್ಣ ನಾಯಕ ಸೆಲೂನ್‌ನಿಂದ ಹೊರಬಂದ ತಕ್ಷಣವೇ, ಎಕ್ಸಿಸ್ ಬ್ಯಾಂಕ್ ಎದುರು ಕೆಲವರು ಏಕಾಏಕಿ ದಾಳಿ ನಡೆಸಿದ್ದಾರೆ. ಆರೋಪಿಗಳು ಹರಿತವಾದ ಆಯುಧಗಳಿಂದ ತಲೆಗೆ ಹೊಡೆದು, ಎದೆಗೆ ಚುಚ್ಚಲು ಯತ್ನಿಸಿದ್ದಾರೆ. ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದ ಗೋಪಾಲಕೃಷ್ಣ ಅವರು ನೆಲಕ್ಕೆ ಬಿದ್ದರೂ, ಮತ್ತೆ ಮತ್ತೆ ದಾಳಿ ಮುಂದುವರಿಸಿದ್ದಾರೆ.

ಈ ಭೀಕರ ದೃಶ್ಯ ಕಂಡ ರಾಘವೇಂದ್ರ ನಾಯಕ ತಕ್ಷಣವೇ ಕಾರಿನಿಂದ ಇಳಿದು ರಕ್ಷಿಸಲು ಮುಂದಾದಾಗ, ಅವರ ಮೇಲೂ ಹಲ್ಲೆ ನಡೆಸಿ ಗಾಯಗೊಳಿಸಲಾಗಿದೆ.

ದಾಳಿಯಿಂದ ತಪ್ಪಿಸಿಕೊಂಡ ಗೋಪಾಲಕೃಷ್ಣ ನಾಯಕ ಸಮೀಪದ ಮನೆಗೆ ಓಡಿ ಹೋಗಿ, ಬಳಿಕ ಅಂಕೋಲಾ ಸಿಂಡಿಕೇಟ್ ಕೋ-ಆಪರೇಟಿವ್ ಸೊಸೈಟಿ ಕಚೇರಿಗೆ ನುಗ್ಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಅಲ್ಲಿದ್ದ ಸಿಬ್ಬಂದಿ ಶಟರ್ ಮುಚ್ಚಿ ಅವರನ್ನು ರಕ್ಷಿಸಿರುವುದು ತಿಳಿದುಬಂದಿದೆ.

ಈ ದಾಳಿಯಲ್ಲಿ ಗೋಪಾಲಕೃಷ್ಣ ನಾಯಕ ಅವರಿಗೆ ತಲೆ, ಎಡಕೈ ಹಾಗೂ ಎಡಕಾಲಿಗೆ ರಕ್ತ ಗಾಯಗಳಾಗಿವೆ. ಆರೋಪಿಗಳು ಕಾರಿನಲ್ಲಿ ಬಂದು ಕೃತ್ಯ ಎಸಗಿರುವ ಸಾಧ್ಯತೆ ಇದ್ದು, ಘಟನೆ ಬಳಿಕ ಪರಾರಿಯಾಗಿದ್ದಾರೆ.

ಬೆಳಗ್ಗೆಯಲ್ಲೇ ನಡೆದ ಈ ಗುಂಪು ದಾಳಿ ಪ್ರಕರಣ ಅಂಕೋಲಾದಲ್ಲಿ ಭೀತಿ ಮೂಡಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.

ಸುದ್ದಿ ಹಾಗೂ ಅಧಿಕೃತ ಸುದ್ದಿಯ ನಡುವಿನ ವ್ಯತ್ಯಾಸ ನಾವು ಅರಿತಿದ್ದೇವೆ!ಕೆನರಾ ನೆಕ್ಸ್ಟ್‌ – ನಿಮ್ಮ ನಂಬಲರ್ಹ ಸುದ್ದಿ ಸಂಗಾತಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share