ಮೈಸೂರು: ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಹೊಸ ಪ್ರತಿಭೆ ಪರಿಚಯವಾಗುತ್ತಿದ್ದು, ನಟ ಅರುಣ್ ಆಚಾರ್ ‘ಜಾಕಿ 42’ ಚಿತ್ರದ ಮೂಲಕ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿರಣ್ ರಾಜ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಅರುಣ್ ಆಚಾರ್ ಮುಖ್ಯ ವಿಲನ್ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ.
ಕಲಾವಿದರ ಕುಟುಂಬದಲ್ಲಿ ಬೆಳೆದಿರುವ ಅರುಣ್ ಆಚಾರ್ ಮೈಸೂರಿನವರು. ಅವರ ತಾತ ಚಿನ್ನ ಆಚಾರ್ ಕರ್ನಾಟಕ ಸಂಗೀತದಲ್ಲಿ ವಿದ್ವಾಂಸರಾಗಿದ್ದು, ನಾಟಕ ಕ್ಷೇತ್ರದಲ್ಲಿಯೂ ಸಂಗೀತಗಾರರಾಗಿ ಗುರುತಿಸಿಕೊಂಡಿದ್ದರು. ತಾತನ ಕಲಾಸಕ್ತಿಯ ಪ್ರಭಾವದಿಂದ ಅರುಣ್ ಅವರಲ್ಲಿಯೂ ಬಾಲ್ಯದಿಂದಲೇ ಕಲೆಯ ಬಗ್ಗೆ ಆಸಕ್ತಿ ಬೆಳೆದಿದೆ.
ಗುರುತೇಜ್ ಶೆಟ್ಟಿ ನಿರ್ದೇಶನದ ‘ಜಾಕಿ 42’ ಚಿತ್ರವನ್ನು ಗೋಲ್ಡನ್ ಗೇಟ್ ಬ್ಯಾನರ್ ಅಡಿಯಲ್ಲಿ ಭಾರತಿ ಸತ್ಯನಾರಾಯಣ ನಿರ್ಮಿಸಿದ್ದಾರೆ. ಹಾರ್ಸ್ ರೇಸ್ ಹಿನ್ನೆಲೆಯ ಕಥೆಯನ್ನು ಹೊಂದಿರುವ ಚಿತ್ರದಲ್ಲಿ ಅರುಣ್ ಆಚಾರ್ ‘ಗಡ್ಡ ನಾಗ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ‘Ronny’ ಚಿತ್ರದಲ್ಲಿ ಅರುಣ್ ಆಚಾರ್ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ಅವರ ಲುಕ್ ಹಾಗೂ ಸ್ಕ್ರೀನ್ ಪ್ರೆಸೆನ್ಸ್ ಗಮನಿಸಿ ‘ಜಾಕಿ 42’ನ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ತಿಳಿಸಿದ್ದಾರೆ.
ಅಭಿನಯಕ್ಕೆ ಹೆಚ್ಚಿನ ಅವಕಾಶವಿರುವ ಹಾಗೂ ವಿಭಿನ್ನವಾದ ಗಟ್ಟಿ ಪಾತ್ರಗಳಿಗೆ ಮುಂದಿನ ದಿನಗಳಲ್ಲಿ ಆದ್ಯತೆ ನೀಡುವುದಾಗಿ ಅರುಣ್ ಆಚಾರ್ ಹೇಳಿದ್ದಾರೆ. ಅವರ ಲುಕ್ ಹಾಗೂ ದೈಹಿಕ ಹೊಂದಾಣಿಕೆ ವಿಲನ್ ಪಾತ್ರಕ್ಕೆ ಸೂಕ್ತವಾಗಿದ್ದು, ಈ ಚಿತ್ರದ ಮೂಲಕ ತಮ್ಮದೇ ಆದ ಗುರುತನ್ನು ಮೂಡಿಸುವ ನಿರೀಕ್ಷೆಯಲ್ಲಿದ್ದಾರೆ.
ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ U/A ಪ್ರಮಾಣಪತ್ರ ದೊರೆತಿದ್ದು, ಶೀಘ್ರದಲ್ಲೇ ಬಿಡುಗಡೆಯ ದಿನಾಂಕ ಘೋಷಣೆಯಾಗಲಿದೆ.
ಚಿತ್ರದಲ್ಲಿ ಕಿರಣ್ ರಾಜ್, ಹೃತಿಕ ಶ್ರೀನಿವಾಸ್, ಯುಕ್ತ ಶೆಟ್ಟಿ, ರಾಜೇಂದ್ರ ಕಾರಂತ್, ಬಾಲರಾಜ್ ವಾಡೆ, ಗಿರೀಶ್ ಹೆಗ್ಡೆ, ದೀಪಕ್ ರೈ ಹಾಗೂ ಶಾಂತಲ ಕಾಮತ್ ಸೇರಿದಂತೆ ಹಲವರು ನಟಿಸಿದ್ದಾರೆ.
ರಾಘವೇಂದ್ರ ಬಿ. ಕೋಲಾರ ಛಾಯಾಗ್ರಹಣ, ಉಮೇಶ್ ಆರ್.ಬಿ. ಸಂಕಲನ, ವಿನೋದ್ ಯಜಮಾನ್ಯ ಸಂಗೀತ ನಿರ್ದೇಶನ ಹಾಗೂ ಭೂಷಣ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ.