ಕಾರವಾರ: ಪಾರಂಪರಿಕ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ನಿವೃತ್ತ ನೌಕರನ ಮೇಲೆ ಕಲ್ಲು ಹಾಗೂ ಬಡಿಗೆಯಿಂದ ಹಲ್ಲೆ ನಡೆಸಿದ ಆರೋಪದಲ್ಲಿ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದಾಶಿವಗಡ ತಾರಿವಾಡಾದ ನಿವಾಸಿ, ನಿವೃತ್ತ ನೌಕರ ಮಾರುತಿ ಬಾಬನಿ ಗಜೀನಕರ (72) ನೀಡಿದ ದೂರಿನ ಮೇರೆಗೆ ಸಂಜಯ ಸುಬ್ರಾಯ ಗಜೀನಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಕುಟುಂಬದ ಪಾರಂಪರಿಕ ಜಮೀನನ್ನು ಕುಟುಂಬ ಸದಸ್ಯರ ನಡುವೆ ಹಂಚಿಕೆ ಮಾಡಲಾಗಿದ್ದು, ಪ್ರತಿಯೊಬ್ಬರೂ ತಮ್ಮ ಪಾಲಿನ ಜಾಗವನ್ನು ಅನುಭವಿಸುತ್ತಿದ್ದಾರೆ. ಆರೋಪಿತ ಸಂಜಯ ಗಜೀನಕರ ಹಾಗೂ ಅವರ ಸಹೋದರ ಪ್ರಶಾಂತ ಗಜೀನಕರ ತಮ್ಮ ಪಾಲಿನ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ.
ಇದೀಗ ಫಿರ್ಯಾದಿದಾರರು ತಮ್ಮ ಪಾಲಿನ ಜಮೀನಿನಲ್ಲಿ ಮನೆ ನಿರ್ಮಾಣಕ್ಕಾಗಿ ಅಡಿಪಾಯ ಕಾಮಗಾರಿ ಆರಂಭಿಸಿದ್ದರು. ಈ ವೇಳೆ ಮೇ 11ರಂದು ಸಂಜೆ ಸುಮಾರು 4 ಗಂಟೆಗೆ ಆರೋಪಿತ ಸಂಜಯ ಗಜೀನಕರ ಸ್ಥಳಕ್ಕೆ ಬಂದು ಕಾರ್ಮಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆಲಸ ನಿಲ್ಲಿಸುವಂತೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಳಿಕ ಫಿರ್ಯಾದಿದಾರರು ಸ್ಥಳಕ್ಕೆ ಬಂದು ಪ್ರಶ್ನಿಸಿದಾಗ ಆರೋಪಿತ ಕೋಪಗೊಂಡು ಕಲ್ಲಿನಿಂದ ತಲೆಗೆ ಹೊಡೆದು, ನಂತರ ಬಡಿಗೆಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಫಿರ್ಯಾದಿದಾರರ ಎಡ ಕಣ್ಣು, ಮೂಗು, ಕೈ ಹಾಗೂ ಕಾಲಿಗೆ ಗಾಯಗಳಾಗಿದ್ದು, ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಇದೇ ವೇಳೆ ಆರೋಪಿತ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.