ಭಟ್ಕಳ: ಗಣೇಶೋತ್ಸವದ ಸಂಭ್ರಮದಲ್ಲಿದ್ದ ಪೆಂಡಾಲ್ನ ಹಿಂಭಾಗದ ಶೆಡ್ ಮೇಲೆ ಕಲ್ಲು ಬಿದ್ದ ಘಟನೆ ಭಟ್ಕಳದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವವರೆಗೆ ಗಣೇಶ ವಿಸರ್ಜನೆ ನಡೆಸದಿರಲು ಆಟೋ ಚಾಲಕ-ಮಾಲಕರ ಸಂಘ ನಿರ್ಧರಿಸಿದೆ.
ಈ ಕುರಿತು ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಪೆಂಡಾಲ್ನ ಹಿಂಭಾಗದ ಶೆಡ್ ಮೇಲೆ ಬೆಳಗ್ಗೆ ಸುಮಾರು 7.20ರ ವೇಳೆಗೆ ಕಲ್ಲು ಬಿದ್ದಿರುವುದು ನಿಜ ಎಂದು ಸ್ಪಷ್ಟಪಡಿಸಿದ್ದಾರೆ. ಘಟನೆ ಕುರಿತು ಕೆಲವೆಡೆ ‘ಬಾಲ್ ಬಿದ್ದಿದೆ’ ಎಂಬ ಮಾತು ಕೇಳಿಬಂದಿದ್ದರೂ, ಪೆಂಡಾಲ್ ಮೇಲೆ ಬಿದ್ದಿರುವುದು ಬಾಲ್ ಅಲ್ಲ, ಕಲ್ಲು ಎಂದು ಅವರು ತಿಳಿಸಿದ್ದಾರೆ.
ಆದರೆ ಕಲ್ಲು ಎಲ್ಲಿಂದ ಬಂತು, ಯಾರು ಎಸೆದರು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಘಟನೆ ನಡೆದ ಕೂಡಲೇ ಭಟ್ಕಳ ಶಹರ ಪೊಲೀಸ್ ಠಾಣೆಯ ಪಿಐ ದಿವಾಕರ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ವೆಂಕಟೇಶ ನಾಯ್ಕ ತಿಳಿಸಿದರು.
ಘಟನೆಯ ಹಿಂದಿನ ಸತ್ಯಾಸತ್ಯತೆ ಪತ್ತೆಹಚ್ಚಲು ಪೆಂಡಾಲ್ನ ಹಿಂಭಾಗದಲ್ಲಿರುವ ಅಂಜುಮಾನ್ ಶಾಲೆಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಿಂದ ಕಲ್ಲು ಎಸೆದವರು ಯಾರು ಎಂಬುದು ಪತ್ತೆಯಾಗುವ ನಿರೀಕ್ಷೆಯನ್ನು ಸಂಘ ವ್ಯಕ್ತಪಡಿಸಿದೆ.
ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವವರೆಗೆ ಗಣೇಶ ವಿಸರ್ಜನೆ ನಡೆಸದಿರಲು ಆಟೋ ಚಾಲಕ-ಮಾಲಕರ ಸಂಘ ತೀರ್ಮಾನಿಸಿದೆ. ಆರೋಪಿಗಳ ಬಂಧನದ ಬಳಿಕವೇ ವಿಸರ್ಜನೆ ನಡೆಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸಂಘದ ಈ ನಿರ್ಧಾರಕ್ಕೆ ಉಳಿದ ಮೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೂ ಸಹಮತ ವ್ಯಕ್ತಪಡಿಸಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.