ಕಾರವಾರ: ತೆಂಗಿನ ಮರದಿಂದ ಮನೆಗಳಿಗೆ ಹಾನಿಯಾಗುತ್ತಿರುವ ಬಗ್ಗೆ ಜರುಗಿದ ತಕರಾರು ಅರ್ಜಿಯ ಪರಿಶೀಲನಾ ಸಭೆಯಲ್ಲಿ, ಮರವನ್ನು ತೆರವುಗೊಳಿಸದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಚೆಂಡಿಯಾ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಪ್ರಶಾಂತ ಎಚ್.ಎಸ್, ಪರಿಸರದ ದಿನದ ಮಹತ್ವ ಕುರಿತಂತೆ ಗ್ರಾಮಸ್ಥರಿಗೆ ಪಾಠ ಮಾಡಿದರು.
ಶುಕ್ರವಾರ ಚೆಂಡಿಯಾ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ನಡೆದ ತಕರಾರು ಅರ್ಜಿಯ ಪರಿಶೀಲನಾ ಸಭೆಯಲ್ಲಿ, ಗ್ರಾಮಸ್ಥರಾದ ನರೇಂದ್ರ ಧಾಕು ದುರ್ಗೇಕರ್ ಮತ್ತು ಕಿಶೋರ ಹರಿಶ್ಚಂದ್ರ ನಾಯ್ಕ ಅವರು ತಮ್ಮ ಮನೆಗಳ ಬಳಿ ಇರುವ ತೆಂಗಿನಮರಗಳಿಂದ ಮನೆಗೆ ಹಾನಿಯಾಗುತ್ತಿದ್ದು ಅವುಗಳನ್ನು ಕೂಡಲೇ ತೆರವುಗೊಳಿಸುವಂತೆ ಕೋರಿದರು.
ಗ್ರಾಮಸ್ಥರ ತಕರಾರುಗಳನ್ನು ಆಲಿಸಿ ಮಾತನಾಡಿದ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ, ಇಂದು ಎಲ್ಲೆಡೆ ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದ್ದು, ಪ್ರತಿಯೊಬ್ಬರೂ ಪರಿಸರವನ್ನು ಉಳಿಸುವ ಹಾಗೂ ಕಾಪಾಡುವ ದೃಷ್ಟಿಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ.
ತೆಂಗಿನ ಮರವನ್ನು ಕಡಿಯಲು ಯಾವುದೇ ರೀತಿ ಕ್ರಮವನ್ನು ಕೈಗೊಳ್ಳಬಾರದು. ಸದರಿ ಮರಕ್ಕೆ ಬೇಕಾದ ಸುರಕ್ಷಾತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಸಮೀಪದ ಮನೆಗಳಿಗೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಮರವನ್ನು ಭದ್ರಪಡಿಸುಂತೆ ಸೂಚಿಸಿ ಪ್ರಕರಣವನ್ನು ಇತ್ಯರ್ಥಪಡಿಸಿದರು.
ಸಭೆಯಲ್ಲಿ ಚೆಂಡಿಯಾ ಪಿ.ಡಿ.ಓ ರಾಮದಾಸ್.ಎಮ್. ನಾಯ್ಕ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.