ದಾಂಡೇಲಿ: ಇಲ್ಲಿನ ಗಾಂಧಿನಗರದ ಆಶ್ರಯ ಕಾಲೋನಿ ನಿವಾಸಿಯಾಗಿರುವ 15 ವರ್ಷದ ಬಾಲಕನೊಬ್ಬ ಮನೆಯಿಂದ ಹೊರಹೋಗಿ ನಾಪತ್ತೆಯಾಗಿರುವ ಕುರಿತು ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಶ್ರಯ ಕಾಲೋನಿ ಗಾಂಧಿನಗರದ ನಿವಾಸಿ ಸುಭಾನಿ ಮುಕ್ಬುಲ್ ಅಹ್ಮದ ಧಾನೆಭಾಗ (41) ಅವರು ನೀಡಿದ ದೂರಿನ ಪ್ರಕಾರ, ಅವರ ಮಗ ಕಳೆದ 15 ದಿನಗಳ ಹಿಂದೆ ಗೋವಾದಲ್ಲಿರುವ ಅಜ್ಜಿಯ ಮನೆಗೆ ತೆರಳಿದ್ದ. ಅಲ್ಲಿ ಹಣ ತೆಗೆದುಕೊಂಡು ಬಂದಿದ್ದ ವಿಚಾರ ತಿಳಿದಾಗ, ಇನ್ನು ಮುಂದೆ ಹಣ ತೆಗೆದುಕೊಳ್ಳಬಾರದು ಎಂದು ಆತನಿಗೆ ಬುದ್ಧಿವಾದ ಹೇಳಲಾಗಿತ್ತು ಎನ್ನಲಾಗಿದೆ.
ಇದೀಗ ಸುಭಾನಿ ಮುಕ್ಬುಲ್ ಅಹ್ಮದ ಧಾನೆಭಾಗ ಅವರ ಪತ್ನಿಯ ತಂಗಿಯ ಮದುವೆ ಹಿನ್ನೆಲೆಯಲ್ಲಿ ಕುಟುಂಬದವರು ಗೋವಾಕ್ಕೆ ತೆರಳಬೇಕಾಗಿದ್ದರಿಂದ, ತನ್ನನ್ನೂ ಗೋವಾಕ್ಕೆ ಕರೆದುಕೊಂಡು ಹೋಗುತ್ತಾರೆ ಎಂಬ ಭಯದಿಂದ ಬಾಲಕ ಯಾರಿಗೂ ಹೇಳದೆ ಮನೆಯಿಂದ ಹೊರಹೋಗಿರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆ.30ರಂದು ಬೆಳಗ್ಗೆ ಸುಮಾರು 11.30ರ ವೇಳೆಗೆ ಬಾಲಕ ಮನೆಯಿಂದ ತನ್ನ ತಾಯಿಯ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದಾನೆ. ಬಳಿಕ ಮೊಬೈಲ್ಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿದೆ.
ಬಾಲಕ ಸ್ವಯಂ ಇಚ್ಛೆಯಿಂದ ಎಲ್ಲಿಗಾದರೂ ತೆರಳಿ ಕಾಣೆಯಾಗಿರಬಹುದು ಅಥವಾ ಅಪ್ರಾಪ್ತ ವಯಸ್ಕನಾಗಿರುವ ಕಾರಣ ಯಾರಾದರೂ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರಬಹುದು ಎಂಬ ಅನುಮಾನವಿದೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ನಾಪತ್ತೆಯಾಗಿರುವ ಬಾಲಕನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.