ಕಾರವಾರ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆಗಳು ಸ್ಥಳೀಯ ದಲಿತ, ಕನ್ನಡ ಪರ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಡಾ.ಬಿ .ಆರ್. ಅಂಬೇಡ್ಕರ್ ಅವರ ಬದುಕು ಮತ್ತು ಬರಹ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿದೆ.
ಸ್ಪರ್ಧೆಯು ಏಪ್ರೀಲ್ 12ರಂದು ಬೆಳಿಗ್ಗೆ 9 ಗಂಟೆಗೆ ಕುಷ್ಟಗಿ ಪಟ್ಟಣದ ಕ್ರೈಸ್ಟ್ ದಿ ಕಿಂಗ್ ಶಾಲೆಯಲ್ಲಿ ನಡೆಯಲಿದೆ. ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಯಾವುದೇ ವಯೋಮಿತಿ, ವಿದ್ಯಾರ್ಹತೆಯ ನಿರ್ಬಂಧ ಇರುವುದಿಲ್ಲ.
ಎಲ್ಲ ಆಸಕ್ತರಿಗೂ ಮುಕ್ತ ಅವಕಾಶವಿದೆ. ರಾಜ್ಯದ ಯಾವುದೇ ಜಿಲ್ಲೆಗಳ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡಿನ ನಕಲು ಪ್ರತಿ ಒದಗಿಸಿ ಭಾಗವಹಿಸಬಹುದು. ಮೊದಲ ಸುತ್ತಿನಲ್ಲಿ 50 ಅಂಕಗಳ ಬಹುಆಯ್ಕೆ ಮಾದರಿಯ ಸುತ್ತು, ಈ ಸುತ್ತಿನಲ್ಲಿ ಅತಿಹೆಚ್ಚು ಅಂಕಗಳಿಸಿದ ಮೊದಲ 12 ಅಭ್ಯರ್ಥಿಗಳು ಎರಡನೇ ಸುತ್ತಿಗೆ ಆಯ್ಕೆಯಾಗುತ್ತಾರೆ.
ಈ 12 ಅಭ್ಯರ್ಥಿಗಳನ್ನು 6 ತಂಡಗಳಾಗಿ ವಿಂಗಡಿಸಿ ಎರಡನೇ ಹಂತದ ಮೌಖಿಕ ಸುತ್ತು ನಡೆಸಲಾಗುವುದು. ವಿಜೇತ ತಂಡಗಳಿಗೆ 50 ಸಾವಿರ ರೂ. ಪ್ರಥಮ ಬಹುಮಾನ, 30 ಸಾವಿರ ರೂ. ದ್ವಿತೀಯ ಬಹುಮಾನ ಹಾಗೂ 20 ಸಾವಿರ ರೂ.ಗಳ ತೃತೀಯ ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು.
ಆಸಕ್ತರು ಏಪ್ರಿಲ್ 11ರ ಒಳಗಾಗಿ ಎಸ್.ಎಸ್. ತೆಮಿನಾಳ-9740421421, ಶ್ರೀನಿವಾಸ ದೇಸಾಯಿ-9845808941, ಸುರೇಶ್ ಅಂಕೋಲಿ-9901797951, ಅಮರೇಗೌಡ-9902180043 ಅಥವಾ ಭರಮಪ್ಪ ಪಿ-9731799080 ಈ ಮೊಬೈಲ್ ನಂಬರುಗಳ ಮೂಲಕ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಕುಷ್ಟಗಿ ವೃತ್ತದ ಪೊಲೀಸ್ ಇನ್ಸಪೆಕ್ಟರ್ ವಿಶ್ವನಾಥ ಹಿರೇಗೌಡರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.