ಗೋಕರ್ಣ: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಹಾಗೂ ಆಹಾರ ಸುರಕ್ಷತಾ ತರಬೇತಿ ಪ್ರಮಾಣಪತ್ರ ಕೇಂದ್ರದ ವತಿಯಿಂದ ಗೋಕರ್ಣದ ಆಹಾರ ವಹಿವಾಟುದಾರರಿಗೆ ಮೊದಲ ಹಂತದ ಒಂದು ದಿನದ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣಪತ್ರ ಕಾರ್ಯಕ್ರಮವು ಗೋಕರ್ಣದ ವೀರಶೈವ ಮಠ ಸಭಾಭವನದಲ್ಲಿ ನಡೆಯಿತು.
ಗೋಕರ್ಣ ಪಂಚಾಯತ ಅಭಿವೃದ್ಧಿ ಅಧಿಕಾರಿ ವ್ಹಿ.ಎ. ಪಟಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಆರೋಗ್ಯ ಹಾಗೂ ಸ್ವಚ್ಛತೆಗಳನ್ನು ಹೆಚ್ಚಿನ ರೀತಿಯಲ್ಲಿ ಅಳವಡಿಸಿಕೊಳ್ಳಲು ಸೂಚಿಸಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದಿನೇಶ ನಾಯ್ಕ ಮಾತನಾಡಿ, ಆಹಾರೋದ್ಯಮಿಗಳು ಆಹಾರದ ಗುಣಮಟ್ಟದ ಜೊತೆಗೆ ಶುಚಿತ್ವ ಹಾಗೂ ಪರಿಸರ ನೈರ್ಮಲ್ಯತೆ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಹಾಗೂ ಈ ತರಬೇತಿ ಕಾರ್ಯಕ್ರಮದ ಮಹತ್ವವನ್ನು ತಾಲೂಕಿನ ಎಲ್ಲ ಆಹಾರ ವಹಿವಾಟುದಾರರು ಅಳವಡಿಸಿಕೊಂಡು ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು.
ನಿವೃತ್ತ ಆಹಾರ ಸುರಕ್ಷತಾ ಅಧಿಕಾರಿ ಹಾಗೂ ಸಲಹೆಗಾರ ಅರುಣ ಕಾಶಿಭಟ್ಟ ಮಾತನಾಡಿ, ಆಹಾರೋದ್ಯಮವನ್ನು ಸಡೆಸಲು ಬೇಕಾದ ಮಾರ್ಗಸೂಚಿಗಳ ಬಗ್ಗೆ ಹಾಗೂ ಶುಚಿತ್ವ ಮತ್ತು ಕಲಬೆರಕೆಗಳ ಕುರಿತು ಮಾಹಿತಿ ನೀಡಿ, ಈ ತರಬೇತಿ ಕಡ್ಡಾಯವಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಆಹಾರೋದ್ಯಮಿಗಳು ಈ ಪ್ರಮಾಣಪತ್ರವನ್ನು ಪಡೆದುಕೊಳ್ಳುವಂತೆ ಸೂಚಿಸಿದರು.
ಆರೋಗ್ಯ ನಿರಿಕ್ಷಣಾಧಿಕಾರಿಮಹಾಂತೇಶ ಹೂಗಾರ ಮಾತನಾಡಿ, ಜಿಲ್ಲೆಯ ಅತಿ ಹೆಚ್ಚಿನ ಪ್ರವಾಸಿಗರ ತಾಣವಿರುವ ಗೋಕರ್ಣದಲ್ಲಿ ಆಹಾರೋದ್ಯಮಿಗಳು ಉತ್ತಮ ಆಹಾರ ಹಾಗೂ ಪರಿಸರ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು.
ಉತ್ತರ ಕನ್ನಡ ಜಿಲ್ಲಾ ಸಂಯೋಜಕ ಮನೋಜ ನಾಯಕ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಈ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಈ ಕಡ್ಡಾಯ FOSTAC ತರಬೇತಿ ಪ್ರಮಾಣ ಪತ್ರದ ಪ್ರಯೋಜನವನ್ನು ಎಲ್ಲಾ ಆಹಾರ ವಹಿವಾಟುದಾರರು ಪಡೆದುಕೊಳ್ಳಲು ಸೂಚಿಸಿದರು.
ಆಹಾರ ಸುರಕ್ಷತಾ ತರಬೇತಿ ಪ್ರಮಾಣ ಪತ್ರ ಕೇಂದ್ರದ ರಾಜ್ಯಾಧ್ಯಕ್ಷ ರಾಘವೇಂದ್ರ ಶೆಟ್ಟಿ ಹಾಗೂ ದೀಪಾ ಶಂಕರಿ, ತರಬೇತುದಾರರು, ಆಹಾರ ಸುರಕ್ಷತಾ ತರಬೇತಿ ಪ್ರಮಾಣ ಪತ್ರ ಕೇಂದ್ರ, ಭಾರತ ಸರಕಾರ ಇವರು ಎಲ್ಲಾ ವಹಿವಾಟುದಾರರಿಗೆ ವಹಿವಾಟುಗಳ ನಿರ್ವಹಣೆ, ಸುರಕ್ಷತಾ ಕ್ರಮ, ಶುಚಿತ್ವ, ಕಲಬೆರಕೆ, ಅನಾವಶ್ಯಕ ಖರ್ಚು ನಿಯಂತ್ರಣ ಮತ್ತು ಕಡ್ಡಾಯ ಪ್ರಮಾಣ ಪತ್ರದ ಮಹತ್ವದ ಕುರಿತು ಮಾಹಿತಿ ಹಾಗೂ FOSTAC ತರಬೇತಿ ನೀಡಿದರು.
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಗೋಕರ್ಣ ವಿಭಾಗ ಸಂಯೋಜಕ ಕೃಷ್ಣ್ಣಮೂರ್ತಿ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.