ಸಿದ್ದಾಪುರ: ವಾಹನ ತಪಾಸಣೆ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದ ಇಬ್ಬರು ಯುವಕರನ್ನು ಪೊಲೀಸರು ತಡೆದು ಪರಿಶೀಲಿಸಿದ ಸಂದರ್ಭದಲ್ಲಿ ಯುವಕನೋರ್ವ ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ನಾಗಪ್ಪ ಅವರು ನೀಡಿದ ದೂರಿನ ಮೇರೆಗೆ, ಶಿರಸಿ ತಾಲೂಕಿನ ಹಂಚಿನಕೇರಿ ನಿವಾಸಿ ಮಹಮ್ಮದ್ ಆಸೀಫ್ ನಜೀರ್ ಸಾಬ್ (26) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜೂನ್ 15ರಂದು ಸಂಜೆ 5.30ರ ಸುಮಾರಿಗೆ ಸಿದ್ದಾಪುರ ಪಟ್ಟಣದ ಎಂ.ಜಿ.ಸಿ. ಕಾಲೇಜು ಸಮೀಪ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಯುವಕರು ಪೊಲೀಸರನ್ನು ಕಂಡು ಗಾಬರಿಯಿಂದ ವಾಹನವನ್ನು ಹಿಂದಕ್ಕೆ ತಿರುಗಿಸಿ ತೆರಳಲು ಯತ್ನಿಸಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಅವರನ್ನು ತಡೆದು ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಅಪರಿಚಿತ ವ್ಯಕ್ತಿಗಳಿಂದ ಗಾಂಜಾ ಖರೀದಿಸಿ ಸೇವಿಸಿರುವುದಾಗಿ ತಿಳಿಸಿದ್ದು, ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಹಿನ್ನೆಲೆಯಲ್ಲಿ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.
ಪರೀಕ್ಷೆಯಲ್ಲಿ ಮಹಮ್ಮದ್ ಆಸೀಫ್ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಮತ್ತೊಬ್ಬ ಯುವಕ ಸಾಹಿಲ್ ಖಾನ್ ಖಾದರ್ ಖಾನ್ (19) ಅವರ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಪ್ರಕರಣದ ಸಂಬಂಧ ತನಿಖೆ ಮುಂದುವರೆದಿದೆ.