ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಫೆಬ್ರವರಿ 14 ಮತ್ತು 15ರಂದು ಶಾಖದ ಅಲೆಯ ವಾತಾವರಣವಿರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಕೆಲ ಮುನ್ನೆಚ್ಚರಿಕೆಗಳನ್ನು ಪಾಲಿಸಲು ಜಿಲ್ಲಾಡಳಿತ ತಿಳಿಸಿದೆ.
ಇವುಗಳನ್ನು ಮಾಡಿ: ದಿನಪೂರ್ತಿ ಸಾಕಷ್ಟು ನೀರು ಕುಡಿಯಿರಿ. ಬಾಯಾರಿಕೆಯಾಗುವವರೆಗೂ ಕಾಯದೇ ನೀರನ್ನು ಸೇವಿಸಿ, ಓ.ಆರ್.ಎಸ್, ನಿಂಬೆ ನೀರು, ಮಜ್ಜಿಗೆ, ಎಳನೀರು ಮುಂತಾದ ದ್ರವಗಳನ್ನು ಸೇವಿಸಿ. ಹಗುರವಾದ, ತಿಳಿ ಬಣ್ಣದ ಮತ್ತು ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ, ತಲೆ ಮತ್ತು ಮುಖವನ್ನು ಟೋಪಿ, ಛತ್ರಿ, ಅಥವಾ ಬಟ್ಟೆಯಿಂದ ಮುಚ್ಚಿಕೊಳ್ಳಿ, ಸಾಧ್ಯವಾದಷ್ಟು ತೀವ್ರ ಬಿಸಿಲಿನ ಸಮಯದಲ್ಲಿ (ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ) ಹೊರಗೆ ಹೋಗುವುದನ್ನು ತಪ್ಪಿಸಿ. ದೇಹದಲ್ಲಿತಲೆಸುತ್ತು, ಅತಿಯಾದ ದೌರ್ಬಲ್ಯ, ವಾಂತಿ, ಜ್ವರದ ಲಕ್ಷಣಗಳು ಕಂಡುಬ0ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಇವುಗಳನ್ನು ಮಾಡಬೇಡಿ:
ತೀವ್ರ ಬಿಸಿಲಿನ ಸಮಯದಲ್ಲಿ ಅನಾವಶ್ಯಕವಾಗಿ ಹೊರಗೆ ಹೋಗದಿರಿ. ಮದ್ಯಪಾನ, ಹೆಚ್ಚು ಕಾಫಿ ಅಥವಾ ಸಿಹಿ ಪಾನೀಯಗಳನ್ನು ಸೇವಿಸಬೇಡಿ. ಕಠಿಣ ಶಾರೀರಿಕ ಕೆಲಸಗಳನ್ನು ಬಿಸಿಲಿನ ಸಮಯದಲ್ಲಿ ಮಾಡಬೇಡಿ. ಮಕ್ಕಳನ್ನು ಅಥವಾ ಸಾಕು ಪ್ರಾಣಿಗಳನ್ನು ಮುಚ್ಚಿದ ವಾಹನಗಳಲ್ಲಿ ಬಿಟ್ಟು ಹೋಗಬಾರದು, ಅತಿಯಾದ ಮಸಾಲೆ ಮತ್ತು ಎಣ್ಣೆ ಪದಾರ್ಥಗಳನ್ನು ಸೇವಿಸಬಾರದು. ಉಷ್ಣಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸದಿರಿ. ತಲೆ ಮುಚ್ಚಿಕೊಳ್ಳದೇ ಬಿಸಿಲಿಗೆ ನೇರವಾಗಿ ಒಡ್ಡಿಕೊಳ್ಳಬಾರದು.