ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮನೆಯ ಕಾಂಪೌಂಡ್ ಒಳಗೆ ನುಗ್ಗಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.
ಕೊಪ್ಪ ಗ್ರಾಮದ ಜಾರ್ಜ್ ರೋಹಿ ಪಾರಲ್ ಅವರ ಮನೆಯ ಆವರಣದಲ್ಲಿ ರಾತ್ರಿ ಸುಮಾರು 10 ಗಂಟೆ ವೇಳೆಗೆ ಹೆಬ್ಬಾವು ಕಾಣಿಸಿಕೊಂಡಿದೆ. ಮನೆಯ ಸಮೀಪ ಸಾಕಲಾಗಿದ್ದ ಕೋಳಿಗಳತ್ತ ಹೆಬ್ಬಾವು ಚಲಿಸುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಅವುಗಳನ್ನು ಹಿಡಿಯುವ ಹುನ್ನಾರದಲ್ಲಿತ್ತು.
ಹೆಬ್ಬಾವನ್ನು ಕಂಡು ಮನೆಯವರು ಆತಂಕಗೊಂಡು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಹಳ್ಳಿ ಗಸ್ತು ಅರಣ್ಯ ಪಾಲಕ ಮುತ್ತುರಾಜ ಸ್ಥಳಕ್ಕೆ ಧಾವಿಸಿ, ಸೂಕ್ತ ಮುನ್ನೆಚ್ಚರಿಕೆ ವಹಿಸಿ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.
ಬಳಿಕ ಹೆಬ್ಬಾವನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಕಾರ್ಯಾಚರಣೆಯಲ್ಲಿ ನಿಶಿಮೇಶ್ವರ ವಾಲ್ಮೀಕಿ, ಮಹೇಶ ರಾಮಣ್ಣ ಸುನಗಾರ್ ಸೇರಿದಂತೆ ಗ್ರಾಮದ ಹಲವು ನಾಗರಿಕರು ಸಹಕರಿಸಿದರು.
ಹಾವು ಮತ್ತು ಮಾನವ ಜೀವಕ್ಕೆ ಯಾವುದೇ ಅಪಾಯವಾಗದಂತೆ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ ಅರಣ್ಯ ಪಾಲಕ ಮುತ್ತುರಾಜ ಅವರ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.