ಯಲ್ಲಾಪುರ: ಮಾನವನ ಬದುಕಿನಲ್ಲಿ ಹಾಗೂ ಪರಿಸರ ವ್ಯವಸ್ಥೆಯಲ್ಲಿ ಗುಬ್ಬಚ್ಚಿಗಳ ಪಾತ್ರ ಮಹತ್ವದ್ದಾಗಿದೆ.
ಅತಿಯಾದ ರಾಸಾಯನಿಕಗಳ ಬಳಕೆ, ಆಧುನೀಕರಣ ಹಾಗೂ ಶಬ್ದ ಮಾಲಿನ್ಯಗಳಂತಹ ಕಾರಣಗಳಿಂದ ಗುಬ್ಬಚ್ಚಿಗಳ ಕ್ಷೀಣಿಸುವಿಕೆಯು ದಿನೇ ದಿನೇ ಹೆಚ್ಚಾಗುತ್ತಿದೆ. ಆದ್ದರಿಂದ ಗುಬ್ಬಚ್ಚಿಗಳ ಸಂತಾನಾಭಿವೃದ್ಧಿಯ ಬಗ್ಗೆ ಗಂಭೀರ ಚಿಂತನೆ ಅತ್ಯಗತ್ಯವಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂಗಮೇಶ ಪ್ರಭಾಕರ್ ಅಭಿಪ್ರಾಯಪಟ್ಟರು.
ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಸ್ಪೇರೋ ಕನ್ಸರ್ವೇಷನ್ ಫೌಂಡೇಶನ್, ಅರಣ್ಯ ಇಲಾಖೆ ಹಾಗೂ ವನಸಿರಿ ವಿಜ್ಞಾನ ಸಂಘ & ಇಕೋ ಕ್ಲಬ್ ವತಿಯಿಂದ ಪರಿಸರದಲ್ಲಿ ಗುಬ್ಬಚ್ಚಿಗಳ ಮಹತ್ವ ಹಾಗೂ ಅವುಗಳ ಸಂರಕ್ಷಣೆಯ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುಬ್ಬಚ್ಚಿಗಳು ಕ್ರಿಮಿ-ಕೀಟಗಳ ನಿಯಂತ್ರಣಕ್ಕೆ ಸಹಕಾರಿ. ಕೃಷಿ ಭೂಮಿಯಲ್ಲಿನ ಸಣ್ಣ ಸಣ್ಣ ಹುಳುಗಳನ್ನು ತಿನ್ನುತ್ತವೆ.
ಗುಬ್ಬಚ್ಚಿಗಳ ಗಾತ್ರ ಚಿಕ್ಕದಾದರೂ ಅವುಗಳ ಪಾತ್ರ ಪರಿಸರಕ್ಕೆ ಮಹತ್ವದ್ದಾಗಿದೆ ಎಂದು ತಿಳಿಸಿದರಲ್ಲದೆ,
ಗುಬ್ಬಚ್ಚಿಗಳ ವರ್ತನೆ, ಆಹಾರ ಪದ್ಧತಿ, ಜೀವನ ಶೈಲಿಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಬೇಸಿಗೆಯ ಕಾಲದಲ್ಲಿ ಗುಬ್ಬಚ್ಚಿಗಳಿಗೆ ನೀರಿನ ದಾಹ ತೀರಿಸಲು ತಮ್ಮ ತಮ್ಮ ಮನೆಯ ಅಂಗಳದಲ್ಲಿ, ಮನೆಯ ತಾರಸಿಯ ಮೇಲೆ ನೀರಿನ ಸಣ್ಣ ಸಣ್ಣ ತೊಟ್ಟಿಗಳನ್ನು ನಿರ್ಮಿಸಿ ಸಹಕರಿಸುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ನಂತರ ವಿದ್ಯಾರ್ಥಿಗಳಿಗೆ ಗುಬ್ಬಚ್ಚಿಯ ಜೀವನ ಶೈಲಿಯ ಬಗ್ಗೆ ವಿಡಿಯೋ ಪ್ರದರ್ಶನ ನಡೆಯಿತು. ಗುಬ್ಬಚ್ಚಿಗಳ ಸಂರಕ್ಷಣೆಗಾಗಿ ಕೃತಕವಾಗಿ ಬಿದಿರಿನಿಂದ ತಯಾರಿಸಿದ ಪರಿಸರ ಸ್ನೇಹಿಯಾದ ಗೂಡುಗಳನ್ನು ಶಾಲೆಯ ಎಲ್ಲಾ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಿತ್ಲಳ್ಳಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ನೀತು ಹಬ್ಬು, ಮಂಚಿಕೇರಿ ವಲಯ ಅರಣ್ಯಧಿಕಾರಿ ಬಸವರಾಜ್ ಬೋಚಳ್ಳಿ, ಉಪವಲಯ ಅರಣ್ಯಧಿಕಾರಿಗಳಾದ ಬೀರಪ್ಪ, ಜ್ಯೋತಿ, ಸಲ್ಮಾನ್ ಹಾಗೂ ಸಿಬ್ಬಂದಿಗಳಾದ ವಿಶ್ವನಾಥ್, ಶಂಕರ್, ರಾಜಶೇಖರ್ ಹಾಜರಿದ್ದರು. ಶಿಕ್ಷಕ ಜೋಶಿ ಕಾರ್ಯಕ್ರಮ ನಿರೂಪಿಸಿದರು.