ನವದೆಹಲಿ: ಜಾಗತಿಕ ಮಟ್ಟದಲ್ಲಿ ಯುದ್ಧದ ಪರಿಣಾಮವಾಗಿ ಕಚ್ಚಾತೈಲದ ಬೆಲೆ ಏರಿಕೆಯಾಗಿದ್ದರೂ, ಭಾರತವು ಇಂಧನ ಭದ್ರತೆ ಮತ್ತು ದರ ನಿಯಂತ್ರಣದ ದಿಕ್ಕಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದೆ.
ಒಂದು ಕಡೆ, ದೇಶದಲ್ಲಿ ಸುಮಾರು 2 ತಿಂಗಳಿಗಾಗುವಷ್ಟು ಇಂಧನವನ್ನು ಶೇಖರಿಸಿಟ್ಟುಕೊಂಡಿರುವ ಭಾರತ, ಇಂಧನ ಭದ್ರತೆಯನ್ನು ಬಲಪಡಿಸಿದೆ. ಜೊತೆಗೆ, ದೇಶೀಯ ಎಲ್ಪಿಜಿ ಉತ್ಪಾದನೆಯನ್ನು ಶೇ.28ರಷ್ಟು ಹೆಚ್ಚಿಸುವ ಮೂಲಕ ಒಳನಾಡಿನ ಬೇಡಿಕೆಯನ್ನು ಪೂರೈಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ಇನ್ನೊಂದೆಡೆ, ನಗರ ಅನಿಲ ವಿತರಣೆಯ ಭಾಗವಾಗಿ 2.9 ಲಕ್ಷ ಮನೆಗಳಿಗೆ ಪಿಎನ್ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಸಂಪರ್ಕ ಕಲ್ಪಿಸಲಾಗಿದ್ದು, ಶುದ್ಧ ಮತ್ತು ಸುಲಭ ಇಂಧನ ಬಳಕೆಗೆ ಉತ್ತೇಜನ ನೀಡಲಾಗಿದೆ.
ಯುದ್ಧದ ಹಿನ್ನೆಲೆ ಕಚ್ಚಾತೈಲದ ಬೆಲೆಯಲ್ಲಿ ಶೇ.70ರಷ್ಟು ಏರಿಕೆಯಾಗಿದೆ. ಇದರಿಂದ ತೈಲ ಕಂಪನಿಗಳ ಮೇಲೆ ಭಾರೀ ಒತ್ತಡ ಉಂಟಾದರೂ, ಕೇಂದ್ರ ಸರ್ಕಾರ ಆಮದು ಸುಂಕವನ್ನು ಕಡಿತಗೊಳಿಸುವ ಮೂಲಕ ಆ ಹೊರೆ ತಗ್ಗಿಸಿದೆ.
ಇದರ ಜೊತೆಗೆ, ಹಿಂದಿನ ಅವಧಿಯಲ್ಲಿ ತೈಲ ಬೆಲೆ ಇಳಿಕೆಯಾದಾಗ ತೈಲ ಕಂಪನಿಗಳು ಗಳಿಸಿದ್ದ ಸುಮಾರು ₹40,000 ಕೋಟಿ ಲಾಭವನ್ನು ಇದೀಗ ಬಳಸುವ ಮೂಲಕ, ಗ್ರಾಹಕರ ಮೇಲೆ ದರ ಏರಿಕೆಯ ಭಾರ ಬೀಳದಂತೆ ನೋಡಿಕೊಳ್ಳಲಾಗಿದೆ.
ಒಟ್ಟಿನಲ್ಲಿ, ಜಾಗತಿಕ ಸಂಕಷ್ಟದ ನಡುವೆಯೂ ಭಾರತವು ಇಂಧನ ಶೇಖರಣೆ, ಉತ್ಪಾದನೆ ಹೆಚ್ಚಳ ಹಾಗೂ ಆರ್ಥಿಕ ಹಸ್ತಕ್ಷೇಪಗಳ ಮೂಲಕ ದರ ಸ್ಥಿರತೆ ಮತ್ತು ಪೂರೈಕೆ ಭದ್ರತೆಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ.