ಜೋಯಿಡಾ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಕಾರವಾರ ಕಚೇರಿಯ ಪರಿಸರ ಅಧಿಕಾರಿ ಬಿ.ಕೆ. ಸಂತೋಷ್ ಹಾಗೂ ಗ್ರಾಮ ಪಂಚಾಯತ ರಾಮನಗರ-ಜೊಯಿಡಾ ಸಿಬ್ಬಂದಿಗಳಾದ ಅರ್ಚನಾ ಮತ್ತು ಕಮಲಾಕರ, ಇವರುಗಳೊಂದಿಗೆ ಗುರುವಾರ ರಾಮನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಪ್ಲೇಟ್, ಸ್ಟ್ರಾ, ಕಪ್ ಮತ್ತು ಕ್ಯಾರಿಬ್ಯಾಗ್ ಇತ್ಯಾದಿಗಳನ್ನೊಳಗೊಂಡ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ತುಂಬಿದ MH-10-CA-1701 ಸಂಖ್ಯೆಯ ಒಮಿನಿ ವಾಹನವನ್ನು ತಡೆದು ಸುಮಾರು 150 ಕೆಜಿಗಳಷ್ಟು ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ (SUP) ವಸ್ತುಗಳನ್ನು ವಶಪಡಿಸಿಕೊಂಡು ಒಟ್ಟು 3 ಸಾವಿರ ರೂ ದಂಡ ವಿಧಿಸಲಾಗಿದೆ.
ಅಲ್ಲದೇ ಹೋಲ್ಸೇಲ್ ಅಂಗಡಿಗಳಾದ ರಾಮದೇವ ಜನರಲ್ ಸ್ಟೋರ್ಸ್ ಹಾಗೂ ಭಾಗ್ಯಲಕ್ಷ್ಮೀ ಟ್ರೇಡರ್ಸ್ ಇವುಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ ಸುಮಾರು 105 ಕೆಜಿ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ಒಟ್ಟು 4 ಸಾವಿರ ರೂ ದಂಡವನ್ನು ಅಂಗಡಿ ಮಾಲೀಕರಿಗೆ ವಿಧಿಸಿ, ಸದರಿ ಪ್ರದೇಶಗಳ ವ್ಯಾಪಾರಿಗಳಲ್ಲಿ ಹಾಗೂ ಅಲ್ಲಿ ನೆರೆದಿದ್ದ ಸಾರ್ವಜನಿಕರಲ್ಲಿ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸದಂತೆ ಜಾಗೃತಿ ಮೂಡಿಸಲಾಯಿತು ಹಾಗೂ ವಶಪಡಿಸಿಕೊಂಡ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಗ್ರಾಮ ಪಂಚಾಯತ ರಾಮನಗರ ಇವರಿಗೆ ವೈಜ್ಞಾನಿಕ ವಿಲೇವಾರಿಗಾಗಿ ಹಸ್ತಾಂತರಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳಾದ ಪ್ಲಾಸ್ಟಿಕ್ ಲೋಟ, ಚಮಚ, ಕ್ಯಾರಿಬ್ಯಾಗ್ ಇತ್ಯಾದಿಗಳನ್ನು ಬಳಸಿ ಎಲ್ಲೆಂದರಲ್ಲಿ, ರಸ್ತೆಯ ಇಕ್ಕೆಲಗಳಲ್ಲಿ ಎಸೆಯಲಾಗುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಜಾಗೃತಗೊಂಡು ನಿಷೇಧಿತ ಏಕ ಬಳಕೆಯ ವಸ್ತುಗಳನ್ನು ಬಳಸದೇ ಅವುಗಳ ಬದಲಿಗೆ ಪರಿಸರ ಸ್ನೇಹಿ ವಸ್ತುಗಳಾದ ಅಡಿಕೆ ಹಾಳೆ/ ಕಟ್ಟಿಗೆ / ಗಾಜು / ಪೇಪರ್ / ಸ್ಟೀಲ್ನಿಂದ ತಯಾರಿಸಿದ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ಪರಿಸರ ನೈರ್ಮಲ್ಯವನ್ನು ಕಾಪಾಡಲು ಸಹಕರಿಸಬೇಕೆಂದು ಪರಿಸರ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.