Saturday, May 30, 2026
HomeLocal Newsಸಮಸ್ಯೆಗಳ ಸುಳಿಯಲ್ಲಿ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನ

ಸಮಸ್ಯೆಗಳ ಸುಳಿಯಲ್ಲಿ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನ

ಹಕ್ಕುಪತ್ರ ವಿತರಣೆಯಲ್ಲಿ ಕರ್ನಾಟಕಕ್ಕೆ 16ನೇ ಸ್ಥಾನ

ಶಿರಸಿ: ಅರಣ್ಯ ಹಕ್ಕು ಕಾಯಿದೆಯ ಅನುಷ್ಠಾನವು ಕಾನೂನಾತ್ಮಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು, ಕಾನೂನಿಗೆ ವಿರುದ್ಧವಾಗಿ ಮಂಜೂರಾತಿ ಪ್ರಕ್ರಿಯೆ ನಡೆಯುತ್ತಿರುವ ಪರಿಣಾಮ ದೇಶದಲ್ಲಿ ಹಕ್ಕುಪತ್ರ ವಿತರಣೆಯ ಅಂಕಿ-ಅಂಶಗಳಲ್ಲಿ ಕರ್ನಾಟಕವು 16ನೇ ಸ್ಥಾನದಲ್ಲಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ Ravindra Nayak ತಿಳಿಸಿದರು.

ಶಿರಸಿಯಲ್ಲಿರುವ ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಅರಣ್ಯವಾಸಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ 21 ರಾಜ್ಯಗಳಲ್ಲಿ ಒಟ್ಟು 51,23,104 ಅರ್ಜಿಗಳು ಅರಣ್ಯ ಹಕ್ಕು ಕಾಯಿದೆಯಡಿ ಸಲ್ಲಿಕೆಯಾಗಿದ್ದು, ಅವುಗಳಲ್ಲಿ 25,11,375 ಅರ್ಜಿಗಳಿಗೆ ಮಾತ್ರ ಹಕ್ಕುಪತ್ರ ವಿತರಿಸಲಾಗಿದೆ ಎಂದರಲ್ಲದೆ, ದೇಶದಾದ್ಯಂತ 18,62,056 ಅರ್ಜಿಗಳು ತಿರಸ್ಕೃತಗೊಂಡಿರುವುದನ್ನೂ ಉಲ್ಲೇಖಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಹಂತದ ಮಂಜೂರಾತಿ ಪ್ರಕ್ರಿಯೆಯಲ್ಲಿ 8,44,530 ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದರೂ, ಕೇವಲ 2,863 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರೆತಿದೆ. ಮತ್ತೊಂದೆಡೆ 73,859 ಅರ್ಜಿಗಳು ತಿರಸ್ಕೃತಗೊಂಡಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಮೂರು ತಲೆಮಾರಿನ ದಾಖಲೆಗಳನ್ನು ಕಡ್ಡಾಯಗೊಳಿಸುವುದು ಹಾಗೂ ಕಾನೂನಿಗೆ ವಿರುದ್ಧವಾದ ಕ್ರಮಗಳನ್ನು ಅನುಸರಿಸುವುದರಿಂದ ಶೇ.73ರಷ್ಟು ಅರ್ಜಿಗಳು ತಿರಸ್ಕೃತವಾಗಿವೆ ಎಂದು ಆರೋಪಿಸಿದ ಅವರು, ಮಂಜೂರಾತಿ ಪ್ರಕ್ರಿಯೆಯಲ್ಲಿ ಹಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಅಡೆತಡೆಗಳು ಮುಂದುವರಿದಿವೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ಗಳಲ್ಲಿ ಚುನಾಯಿತ ಪ್ರತಿನಿಧಿಗಳ ಕೊರತೆಯಿಂದ ಹಕ್ಕು ಸಮಿತಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ರವೀಂದ್ರ ನಾಯಕ ಹೇಳಿದರು.

ಸಭೆಯಲ್ಲಿ ಯಾಕುಬ್ ಸಾಬ್, ಜೆ.ಜೆ. ಕುರಿಯಾ ಕೋಸ್, ಶಿವರಾಮ ಮಾನೇಶ್ವರ ಗೌಡ, ವೆಂಕಟ ಹೊನ್ನಪ್ಪ ಗೌಡ, ರಾಘವೇಂದ್ರ ಬೀರಪ್ಪ ಗೌಡ, ರೇವು ಯಂಕು ಮರಾಠಿ, ವಿನಾಯಕ ದುರ್ಗು ಮುಕ್ತಿ, ಸುರೇಶ್ ರಾಮ ಮರಾಠಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share