ಕಾರವಾರ: ನಂದನಗದ್ದಾ–ಸುಂಕೇರಿ ರಸ್ತೆಯಲ್ಲಿ ಬೈಕ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಹಿಂಬದಿ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಈ ಸಂಬಂಧ ಎರಡೂ ವಾಹನಗಳ ಚಾಲಕರ ವಿರುದ್ಧ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಳಮಕ್ಕಿ ನಿವಾಸಿ ಸುಬ್ರಾಯ ಸೋಮ ಗೌಡ ಅವರು ನೀಡಿದ ದೂರಿನ ಮೇರೆಗೆ, ಬೈಕ್ ಸವಾರ ಗಿರೀಶ ಗೋಪಾಲ ಗೌಡ (21) ಹಾಗೂ ಆಟೋ ರಿಕ್ಷಾ ಚಾಲಕ ಎಸ್.ಕೆ. ಅಸ್ಲಾಂ ನೂರ ಅಲಂ ಶೇಖ್ (35) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜೂನ್ 10ರಂದು ಸಂಜೆ ಸುಮಾರು 5.45 ಗಂಟೆಗೆ ಗಿರೀಶ ಗೋಪಾಲ ಗೌಡ ಅವರು ತಮ್ಮ ಸಹೋದರ ಲೋಕೇಶ ಗೋಪಾಲ ಗೌಡರನ್ನು ಬೈಕ್ನ ಹಿಂಬದಿ ಸೀಟಿನಲ್ಲಿ ಕೂರಿಸಿಕೊಂಡು ನಂದನಗದ್ದಾದಿಂದ ಸುಂಕೇರಿ ಕಡೆಗೆ ತೆರಳುತ್ತಿದ್ದರು. ಇದೇ ವೇಳೆ ಎದುರಿನ ದಿಕ್ಕಿನಿಂದ ಆಟೋ ರಿಕ್ಷಾ ಚಾಲಕ ಎಸ್.ಕೆ. ಅಸ್ಲಾಂ ಅವರು ವಾಹನ ಚಲಾಯಿಸಿಕೊಂಡು ಬರುತ್ತಿದ್ದರು.
ಎರಡೂ ವಾಹನಗಳು ರಸ್ತೆಯ ಮಧ್ಯಭಾಗದಲ್ಲಿ ಅತಿವೇಗವಾಗಿ ಸಂಚರಿಸುತ್ತಿದ್ದ ವೇಳೆ, ಬೈಕ್ ಸವಾರ ಬ್ರೇಕ್ ಹಾಕಿದ ಪರಿಣಾಮ ವಾಹನ ಸ್ಕಿಡ್ ಆಗಿ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಪಘಾತದಲ್ಲಿ ಬೈಕ್ ಹಿಂಬದಿ ಸವಾರ ಲೋಕೇಶ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಬೈಕ್ ಸವಾರ ಗಿರೀಶ ಅವರ ಮೂಗು ಹಾಗೂ ಎಡ ಭುಜಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ.
ಅಜಾಗರೂಕತೆ ಮತ್ತು ಅಪಾಯಕಾರಿಯಾಗಿ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾದ ಆರೋಪದಡಿ ಎರಡೂ ವಾಹನಗಳ ಚಾಲಕರ ವಿರುದ್ಧ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.