ಕಾರವಾರ: ಹೊನ್ನಾವರ ತಾಲೂಕಿನ ಕಾಸರಕೋಡ ಕಡಲತೀರಕ್ಕೆ ಸತತ ಆರನೇ ಬಾರಿ ಪ್ರತಿಷ್ಠಿತ ಬ್ಲೂ ಫ್ಲಾಗ್ ಮಾನ್ಯತೆ ದೊರೆತಿದೆ. ಇದರ ಅಂಗವಾಗಿ ಭಾನುವಾರ ಕಾಸರಕೋಡ ಕಡಲತೀರದಲ್ಲಿ ಬ್ಲೂ ಫ್ಲಾಗ್ ಧ್ವಜಾರೋಹಣ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಳ ಗೌರಿ ಭಟ್ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ದೇಶಾದ್ಯಂತ ಈ ವರ್ಷ 14 ಕಡಲತೀರಗಳಿಗೆ ಬ್ಲೂ ಫ್ಲಾಗ್ ಮಾನ್ಯತೆ ದೊರೆತಿದ್ದು, ಕರ್ನಾಟಕದ ಮೂರು ಕಡಲತೀರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಅವುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡ ಕಡಲತೀರವೂ ಒಂದಾಗಿದೆ. ಈ ಕಡಲತೀರಕ್ಕೆ ಸತತ ಆರನೇ ಬಾರಿ ಈ ಗೌರವ ಲಭಿಸಿರುವುದು ವಿಶೇಷವಾಗಿದೆ ಎಂದರು.
ಕಡಲತೀರದ ಸ್ವಚ್ಛತೆ, ಪ್ರವಾಸಿಗರ ಸುರಕ್ಷತೆ, ಉತ್ತಮ ಮೂಲಸೌಕರ್ಯ ವ್ಯವಸ್ಥೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಬಳಕೆಯೊಂದಿಗೆ ಪರಿಸರ ಸ್ನೇಹಿ ರೀತಿಯಲ್ಲಿ ಅಭಿವೃದ್ಧಿಪಡಿಸಿರುವುದನ್ನು ಪರಿಗಣಿಸಿ ಈ ಮಾನ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಕಾಸರಕೋಡ ಕಡಲತೀರದಲ್ಲಿ ಸ್ವಚ್ಛತೆ ಕಾಪಾಡಲು ಭಾರತ ಸರ್ಕಾರದಿಂದ ಸ್ವಚ್ಛತಾ ಯಂತ್ರಗಳನ್ನು ಒದಗಿಸಲಾಗಿದೆ. ಜೊತೆಗೆ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಅವರಿಂದ ಸ್ವಚ್ಛತೆ, ಪ್ರವಾಸಿಗರ ಸುರಕ್ಷತೆ ಹಾಗೂ ಮೂಲಸೌಕರ್ಯಗಳ ನಿರ್ವಹಣೆ ಮಾಡಲಾಗುತ್ತಿದೆ. ಬೀಚ್ನಲ್ಲಿ ಜೀವ ರಕ್ಷಕರನ್ನೂ ನಿಯೋಜಿಸಲಾಗಿದೆ ಎಂದರು.
ಜಿಲ್ಲೆಯ ಕಾರವಾರದ ರವೀಂದ್ರ ಕಡಲತೀರ ಹಾಗೂ ಅಪ್ಸರಕೊಂಡ ಕಡಲತೀರಗಳನ್ನು ಸಹ ಮುಂದಿನ ದಿನಗಳಲ್ಲಿ ಬ್ಲೂ ಫ್ಲಾಗ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಇದೆ ಎಂದು ಮಾಹಿತಿ ನೀಡಿದರು.