ಶಿರಸಿ: ಗಡಿಯಲ್ಲಿ ಬಂದೂಕು ಹಿಡಿದು ದೇಶ ಕಾಯುತ್ತಿರುವ ಯೋಧರಿಗಾಗಿ ಸೋಂದಾ ಶ್ರೀ ಸ್ವರ್ಣವಲ್ಲಿ ಮಠದಲ್ಲಿ ಲಕ್ಷಾಂತರ ತುಳಸಿ ದಳಗಳು ಶ್ರೀಕೃಷ್ಣನ ಪಾದ ಸೇರುತ್ತವೆ. ಇದು ದೇಶದ ಸೈನಿಕರ ಆರೋಗ್ಯ, ಸುರಕ್ಷತೆ ಮತ್ತು ಕ್ಷೇಮಕ್ಕಾಗಿ ಕಳೆದ 27 ವರ್ಷಗಳಿಂದ ಮುಂದುವರಿದುಕೊಂಡು ಬಂದಿರುವ ಅಪರೂಪದ ಧಾರ್ಮಿಕ ಸಂಕಲ್ಪ.
ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿ ಸೆ.4ರಂದು ನಡೆಯಲಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ತುಳಸಿ ಅರ್ಚನಾ ಮಹೋತ್ಸವ ಈ ಕಾರಣಕ್ಕಾಗಿಯೇ ವಿಶೇಷ ಗಮನ ಸೆಳೆದಿದೆ.
ಪರಮಪೂಜ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಸಂಕಲ್ಪದಂತೆ ಕಾರ್ಗಿಲ್ ಯುದ್ಧದ ಸಂಕಷ್ಟದ ಸಂದರ್ಭದಲ್ಲಿ ಆರಂಭವಾದ ಈ ತುಳಸಿ ಅರ್ಚನೆ ಇದೀಗ 27ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಬಾರಿ 8 ಲಕ್ಷ ತುಳಸಿ ದಳಗಳನ್ನು ಶ್ರೀಕೃಷ್ಣನಿಗೆ ಅರ್ಪಿಸಿ, ದೇಶದ ಎಲ್ಲ ಯೋಧರ ಆರೋಗ್ಯ, ರಕ್ಷಣೆ ಮತ್ತು ಬಲವರ್ಧನೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಶ್ರೀಮಠ ನಿರ್ಧರಿಸಿದೆ.
ತುಳಸಿಯ ಒಂದೊಂದು ದಳವೂ ಭಕ್ತಿಯ ಸಂಕೇತವಾದರೆ, ಇಲ್ಲಿ ಅವುಗಳ ಹಿಂದೆ ದೇಶ ಕಾಯುವ ಯೋಧರಿಗಾಗಿ ಸಲ್ಲಿಸುವ ಪ್ರಾರ್ಥನೆಯಿದೆ. ಗಡಿಯಲ್ಲಿ ಸೈನಿಕರು ದೇಶದ ರಕ್ಷಣೆಗೆ ನಿಂತಿರುವಾಗ, ಅವರ ಕ್ಷೇಮಕ್ಕಾಗಿ ಮಠದಲ್ಲಿ ನಡೆಯುತ್ತಿರುವ ಈ ಧಾರ್ಮಿಕ ಸಂಕಲ್ಪ ತನ್ನದೇ ಆದ ಅರ್ಥ ಪಡೆದುಕೊಂಡಿದೆ.
ಸೆ.4ರಂದು ಬೆಳಗ್ಗಿನಿಂದಲೇ ಸ್ವರ್ಣವಲ್ಲಿ ಮಠದಲ್ಲಿ ಲಕ್ಷ ತುಳಸಿ ಅರ್ಚನೆ, ವಿಶೇಷ ಪೂಜೆ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿತರಣೆ ನಡೆಯಲಿದೆ. ಪರಮಪೂಜ್ಯ ಶ್ರೀ ಶ್ರೀ ಯತಿದ್ವಯರ ದಿವ್ಯ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಈ ಸಂಕಲ್ಪದಲ್ಲಿ ಭಕ್ತರೂ ಪಾಲುದಾರರಾಗಬಹುದು. ತಮ್ಮ ಮನೆಗಳ ಸುತ್ತಮುತ್ತಲಿನ ತುಳಸಿ ಗಿಡಗಳಿಂದ ದಳಗಳನ್ನು ಸಂಗ್ರಹಿಸಿ ಸೆ.4ರಂದು ಅಥವಾ ಅದಕ್ಕೂ ಮುನ್ನ ಮಠಕ್ಕೆ ತಲುಪಿಸುವಂತೆ ಸ್ವರ್ಣವಲ್ಲಿ ಮಠದ ವತಿಯಿಂದ ಮನವಿ ಮಾಡಲಾಗಿದೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮದೊಂದಿಗೆ ದೇಶದ ರಕ್ಷಕರಿಗಾಗಿ ನಡೆಯುವ ಈ ವಿಶೇಷ ಸಂಕಲ್ಪದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಠದ ವತಿಯಿಂದ ಆಹ್ವಾನಿಸಲಾಗಿದೆ.