Saturday, May 30, 2026
HomeLocal Newsಮಂಜುಗುಣಿ ಶ್ರೀಮನ್ಮಹಾರಥೋತ್ಸವ: ಭಕ್ತಿಭಾವದಲ್ಲಿ ಸಾಗರದಂತೆ ಸೇರಿದ ಭಕ್ತರು

ಮಂಜುಗುಣಿ ಶ್ರೀಮನ್ಮಹಾರಥೋತ್ಸವ: ಭಕ್ತಿಭಾವದಲ್ಲಿ ಸಾಗರದಂತೆ ಸೇರಿದ ಭಕ್ತರು

ಶಿರಸಿ: ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ‘ಚಿಕ್ಕ ತಿರುಪತಿ’ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಕ್ಷೇತ್ರ ಮಂಜುಗುಣಿ ವೇಂಕಟರಮಣ ದೇವಸ್ಥಾನದಲ್ಲಿ ಪರಾಭವ ನಾಮ ಸಂವತ್ಸರದ ಶ್ರೀಮನ್ಮಹಾರಥೋತ್ಸವ ಏಪ್ರಿಲ್ 2ರಂದು ಭಕ್ತಿಭಾವದಿಂದ, ಅದ್ಧೂರಿಯಾಗಿ ನೆರವೇರಿತು.

ಬೆಳಿಗ್ಗೆ 7:30ಕ್ಕೆ ರಥ ಎಳೆಯುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು, ಸಾವಿರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು. ಹೂವಿನ ಅಲಂಕಾರಗಳಿಂದ ಸಿಂಗರಿಸಲ್ಪಟ್ಟ ರಥವು ವಿಶೇಷ ಆಕರ್ಷಣೆಯಾಗಿದ್ದು, ಭಕ್ತರ ಮನಸೆಳೆಯಿತು.

ಪೂಜೆ, ಮಂಗಳಾರತಿ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ಭಕ್ತರ ಜಯಘೋಷಗಳ ಮಧ್ಯೆ ನಗರದ ಸುತ್ತ ಮೆರವಣಿಗೆ ನಡೆಸಲಾಯಿತು. “ಗೋವಿಂದಾ, ಗೋವಿಂದಾ” ಎಂಬ ಘೋಷಣೆಗಳು ಎಲ್ಲೆಡೆ ಮೊಳಗಿದವು.

ಈ ಸಂದರ್ಭದಲ್ಲಿ ಭಕ್ತರಿಗೆ  ಅತಿರಸ ಹಾಗೂ ಶ್ರೇವಾರಿ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನದ ಅನ್ನಸಂತರ್ಪಣೆ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ಭಕ್ತರ ಭದ್ರತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ದೇವಸ್ಥಾನದ ಆಡಳಿತ ಮಂಡಳಿಯ ಪರವಾಗಿ ಪ್ರಧಾನ ಅರ್ಚಕರಾದ  ಶ್ರೀನಿವಾಸ ಭಟ್ ಅವರು ಭಕ್ತರಿಗೆ ರಥ ಎಳೆಯಲು ಸೂಚನೆ ನೀಡಿದರು. ಇದೇ ವೇಳೆ ಪರಾಭವ ನಾಮ ಸಂವತ್ಸರದ ಅರ್ಥವನ್ನು ವಿವರಿಸಿ, “ಸೋಲನ್ನು ಮೀರಿಸಲು ವೆಂಕಟರಮಣನನ್ನು ಸ್ಮರಿಸುತ್ತಾ ರಥ ಎಳೆಯುವುದರಿಂದ ಹೊಸ ಸಂವತ್ಸರವನ್ನು ಶುಭವಾಗಿ ಆರಂಭಿಸಬೇಕು” ಎಂದು ಹೇಳಿದರು.

ಒಟ್ಟಿನಲ್ಲಿ, ಈ ವರ್ಷದ ಶ್ರೀಮನ್ಮಹಾರತೋತ್ಸವವು ಭಕ್ತಿಭಾವ, ಸಂಭ್ರಮ ಮತ್ತು ಶಿಸ್ತಿನ ಸಂಕೇತವಾಗಿ ಯಶಸ್ವಿಯಾಗಿ ನೆರವೇರಿತು.

ವರದಿ: ಉಷಾ ಭಟ್, ಮಂಜುಗುಣಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share