ಕಾರವಾರ: ಮಳೆಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರವಾಸೋದ್ಯಮ ಇಲಾಖೆ ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಸಮುದ್ರ ಹಾಗೂ ನದಿಗಳಲ್ಲಿ ಅನುಮತಿ ಪಡೆದಿದ್ದ ಜಲಸಾಹಸ ಕ್ರೀಡೆಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಜಿಲ್ಲೆಯ ಪ್ರಮುಖ ಎಂಟು ಕಡಲತೀರಗಳಾದ ಅಂಕೋಲಾದ ನದಿಭಾಗ ಮತ್ತು ಹೊನ್ನಗುಡಿ, ಕುಮಟಾದ ಗೋಕರ್ಣ, ಕುಡ್ಲೆ, ಓಂ, ಧಾರೇಶ್ವರ, ಹೆಡ್ಬಂದರ್, ಅಪ್ಸರಕೊಂಡ ಹಾಗೂ ಭಟ್ಕಳದ ಮುರುಡೇಶ್ವರ ಕಡಲತೀರಗಳಲ್ಲಿ ಎಚ್ಚರಿಕಾ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.
ಅಲ್ಲದೆ, ಮುರುಡೇಶ್ವರ, ಗೋಕರ್ಣ, ಓಂ ಮತ್ತು ಕುಡ್ಲೆ ಕಡಲತೀರಗಳಲ್ಲಿ ಹೊಸ ವಾಚ್ಟವರ್ಗಳನ್ನು ಸ್ಥಾಪಿಸಲಾಗಿದ್ದು, ಹೆಚ್ಚುವರಿ ಲೈಫ್ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜಿಲ್ಲೆಯ ಪ್ರಮುಖ ಜಲಪಾತಗಳಾದ ವಿಭೂತಿ, ಬೆಣ್ಣೆಹೊಳೆ, ಮುರೆಗಾರ, ಶಿವಗಂಗಾ, ಮತ್ತಿಗೆಟ್ಟಾ, ಉಂಚಳ್ಳಿ, ಬುರುಡೆ ಹಾಗೂ ಸಾತೋಡಿ ಜಲಪಾತಗಳ ಸಮೀಪವೂ ಎಚ್ಚರಿಕಾ ಫಲಕಗಳನ್ನು ಅಳವಡಿಸಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ.
ಇದರ ಜೊತೆಗೆ, ಜಿಲ್ಲೆಯ 13 ಪ್ರಮುಖ ಜಲಪಾತಗಳ ಬಳಿ ಸುರಕ್ಷತೆಗಾಗಿ ಹೋಮ್ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಗೃಹರಕ್ಷಕ ಇಲಾಖೆಗೆ ಮನವಿ ಮಾಡಲಾಗಿದೆ. ಕಾರವಾರ ಕಡಲತೀರದಲ್ಲಿ ಸ್ವಚ್ಛತೆ ಕಾಪಾಡಲು ಆರು ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಬೀಚ್ ಸ್ವಚ್ಛತಾ ಯಂತ್ರವನ್ನು ದುರಸ್ತಿಗೊಳಿಸಿ ಕಾರ್ಯಾಚರಣೆಗೆ ತರಲಾಗಿದೆ.
ಮಳೆಗಾಲದಲ್ಲಿ ಅಪಾಯ ತಪ್ಪಿಸುವ ಉದ್ದೇಶದಿಂದ ಸಮುದ್ರ ಹಾಗೂ ನದಿಗಳಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದಿತ ಜಲಸಾಹಸ ಕ್ರೀಡಾ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.