ನಮ್ಮ ಜೀವನದಲ್ಲಿ ಪ್ರತಿದಿನ ಹೊಸ ಹೊಸ ಜನರ ಪರಿಚಯವಾಗುತ್ತಲೇ ಇರುತ್ತದೆ. ಕೆಲವರು ಮೊದಲ ಭೇಟಿಯಲ್ಲೇ ತುಂಬಾ ಒಳ್ಳೆಯವರು, ಸೌಮ್ಯ ಸ್ವಭಾವದವರು ಎಂದು ಅನಿಸುತ್ತಾರೆ. ಇನ್ನೂ ಕೆಲವರು ಹೆಚ್ಚು ಮಾತನಾಡದೆ, ಸುಮ್ಮನೆ ತಮ್ಮ ಪಾಡಿಗೆ ತಾವು ಇರುತ್ತಾರೆ. ಇಂತಹವರನ್ನು ಕೆಲವರು “ಇವರಿಗೆ ಏನೂ ಗೊತ್ತಿಲ್ಲ”, “ತುಂಬಾ ಮುಗ್ಧರು” ಎಂದು ಭಾವಿಸಿಬಿಡುತ್ತಾರೆ. ಆದರೆ ನಿಜ ಜೀವನದಲ್ಲಿ ಹಾಗಿರಬೇಕೆಂದೇನಿಲ್ಲ.
ಆಚಾರ್ಯ ಚಾಣಕ್ಯರ ಪ್ರಕಾರ, ಕೆಲವರು ಉದ್ದೇಶಪೂರ್ವಕವಾಗಿ ತಮ್ಮ ಸಾಮರ್ಥ್ಯವನ್ನು ಹೊರಗೆ ತೋರಿಸಿಕೊಳ್ಳುವುದಿಲ್ಲ. ಅವರು ಹೆಚ್ಚು ಮಾತನಾಡುವುದಿಲ್ಲ, ಅನಗತ್ಯ ವಾದಕ್ಕೂ ಇಳಿಯುವುದಿಲ್ಲ. ಇದರಿಂದ ಅವರನ್ನು ದುರ್ಬಲರು ಅಥವಾ ಮೂರ್ಖರು ಎಂದುಕೊಳ್ಳುವುದು ದೊಡ್ಡ ತಪ್ಪು.
ಸಾಮಾನ್ಯವಾಗಿ ಯಾರಾದರೂ ನಮ್ಮನ್ನು ಟೀಕಿಸಿದರೆ ಅಥವಾ ಅವಮಾನ ಮಾಡಿದರೆ ತಕ್ಷಣ ಪ್ರತಿಕ್ರಿಯೆ ನೀಡಲು ಮನಸ್ಸಾಗುತ್ತದೆ. ಆದರೆ ನಿಜವಾದ ಆತ್ಮವಿಶ್ವಾಸ ಇರುವವರು ಪ್ರತಿಯೊಂದು ಮಾತಿಗೂ ಉತ್ತರ ಕೊಡಲು ಹೋಗುವುದಿಲ್ಲ.
ಯಾರಾದರೂ ಅವರನ್ನು ಮೂರ್ಖ ಎಂದರೂ, ಅಸಮರ್ಥ ಎಂದರೂ ಅವರು ಸುಮ್ಮನೆ ನಗುತ್ತಾ ಬಿಡಬಹುದು. ಏಕೆಂದರೆ ಅವರಿಗೆ ತಮ್ಮ ಸಾಮರ್ಥ್ಯದ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಎಲ್ಲರಿಗೂ ತಮ್ಮನ್ನು ಸಾಬೀತುಪಡಿಸಬೇಕಾದ ಅಗತ್ಯ ಅವರಿಗಿರುವುದಿಲ್ಲ.
ಕೆಲವರು ಸಭೆಯಲ್ಲಿ ಅಥವಾ ಸ್ನೇಹಿತರ ಗುಂಪಿನಲ್ಲಿ ಹೆಚ್ಚು ಮಾತನಾಡುವುದಿಲ್ಲ. ಆದರೆ ಎಲ್ಲರ ಮಾತನ್ನೂ ಗಮನದಿಂದ ಕೇಳುತ್ತಿರುತ್ತಾರೆ. ಯಾರು ಏನು ಹೇಳುತ್ತಿದ್ದಾರೆ, ಏನು ನಡೆಯುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ.
ನಂತರ ಮಾತನಾಡುವ ಸಂದರ್ಭ ಬಂದಾಗ ಅವರ ಒಂದು ಮಾತೇ ಎಲ್ಲರ ಗಮನ ಸೆಳೆಯುತ್ತದೆ. ಯಾಕೆಂದರೆ ಅವರು ಯೋಚಿಸಿ ಮಾತನಾಡುತ್ತಾರೆ. ಅಂಥವರನ್ನು ಕೇವಲ ಮೌನಿಯಾಗಿದ್ದಾರೆ ಎಂದು ಕಡಿಮೆ ಅಂದಾಜು ಮಾಡಬಾರದು.
ಇಂದಿನ ದಿನಗಳಲ್ಲಿ ಎಲ್ಲರೂ ತಕ್ಷಣ ಪ್ರತಿಕ್ರಿಯಿಸಲು ಬಯಸುತ್ತಾರೆ. ಆದರೆ ಕೆಲವರು ಮಾತಿಗಿಂತ ಮೌನಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಅವರು ಕೋಪ ಬಂದರೂ ತಕ್ಷಣ ಸಿಡಿಯುವುದಿಲ್ಲ. ಯೋಚಿಸುತ್ತಾರೆ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ನಂತರ ಪ್ರತಿಕ್ರಿಯಿಸುತ್ತಾರೆ.
ಈ ಗುಣವೇ ಅವರನ್ನು ಇತರರಿಂದ ವಿಭಿನ್ನರನ್ನಾಗಿಸುತ್ತದೆ.
ಹೆಚ್ಚು ಮಾತನಾಡುವವನೇ ಬುದ್ಧಿವಂತ, ಸುಮ್ಮನಿರುವವನು ಏನೂ ತಿಳಿಯದವನು ಎಂಬ ಕಲ್ಪನೆ ತಪ್ಪು. ಕೆಲವೊಮ್ಮೆ ಶಾಂತವಾಗಿ ಕುಳಿತಿರುವ ವ್ಯಕ್ತಿಯೇ ಪರಿಸ್ಥಿತಿಯನ್ನು ಅತ್ಯಂತ ಸರಿಯಾಗಿ ಅರ್ಥಮಾಡಿಕೊಂಡಿರುತ್ತಾನೆ.
ಆದ್ದರಿಂದ ನಮ್ಮ ಸುತ್ತಮುತ್ತ ಇರುವ ಜನರನ್ನು ಕೇವಲ ಅವರ ಮಾತು ಅಥವಾ ಮುಖಭಾವ ನೋಡಿ ಅಳೆಯಬಾರದು. ಮುಗ್ಧರಂತೆ ಕಾಣುವವರಲ್ಲೂ ಅಪಾರ ಜ್ಞಾನ, ಅನುಭವ ಮತ್ತು ಚಾಣಾಕ್ಷತನ ಅಡಗಿರಬಹುದು.
ಹೆಚ್ಚು ಮಾತನಾಡದ, ಎಲ್ಲದಕ್ಕೂ ಪ್ರತಿಕ್ರಿಯಿಸದ ವ್ಯಕ್ತಿಯನ್ನು ಎಂದಿಗೂ ದುರ್ಬಲ ಎಂದು ಭಾವಿಸಬೇಡಿ. ಕೆಲವೊಮ್ಮೆ ಅವರ ಮೌನವೇ ಅವರ ದೊಡ್ಡ ಶಕ್ತಿಯಾಗಿರುತ್ತದೆ!
– ಸೌಪರ್ಣಿಕಾ.