Saturday, May 30, 2026
HomeCrimeಶಿರಸಿ | ಹಲ್ಲೆ, ಜೀವ ಬೆದರಿಕೆ ಆರೋಪ; ಐವರ ವಿರುದ್ಧ ಪ್ರಕರಣ

ಶಿರಸಿ | ಹಲ್ಲೆ, ಜೀವ ಬೆದರಿಕೆ ಆರೋಪ; ಐವರ ವಿರುದ್ಧ ಪ್ರಕರಣ

ಶಿರಸಿ: ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಐವರು ಹಾಗೂ ಇತರರ ವಿರುದ್ಧ ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯತ್ರಿನಗರದ ಬನವಾಸಿ ರಸ್ತೆಯ ನಿವಾಸಿ ಹಾಗೂ ಗುತ್ತಿಗೆದಾರ ರಮೇಶ ನಾಗೇಶ ದುಬಾಶಿ (60) ಅವರು ನೀಡಿದ ದೂರಿನ ಮೇರೆಗೆ ಯಶವಂತ ಎಂ.ಬೈಂದೂರ, ಕಾಶೀನಾಥ ಎಂ. ಬೈಂದೂರ, ಮಂಜುನಾಥ ಎಂ.ಬೈಂದೂರ, ನಾಗೇಂದ್ರ ಬಿ.ಬೈಂದೂರ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮೇ 29ರ ರಾತ್ರಿ ಯಶವಂತ ಬೈಂದೂರ ಅವರು ದೂರವಾಣಿ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿ, ದೇವಿಕೆರೆ ಸರ್ಕಲ್‌ಗೆ ಬರುವಂತೆ ಹೇಳಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಬಳಿಕ ರಮೇಶ ದುಬಾಶಿ ಮಂಜುನಾಥ ಶೇರುಗಾರ ಹಾಗೂ ಸದಾನಂದ ಮದ್ದೋಡಿ ಅವರೊಂದಿಗೆ ದೇವಿಕೆರೆ ಸರ್ಕಲ್ ಸಮೀಪದ ಟಿ.ಎಸ್.ಎಸ್. ರಸ್ತೆಯ ಸುವರ್ಣ ಬ್ಯಾಂಕ್ ಹತ್ತಿರ ತೆರಳಿದ್ದಾರೆ.

ಅಲ್ಲಿ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದ್ದು, ನಂತರ ಮಂಜುನಾಥ ಶೇರುಗಾರ ಮತ್ತು ಸದಾನಂದ ಮದ್ದೋಡಿ ಅವರನ್ನು ಮನೆಗೆ ಕರೆದೊಯ್ಯುವ ವೇಳೆ ಆರೋಪಿತರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದೇ ವೇಳೆ, “ಜೀವಂತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿ, ಮಂಜುನಾಥ ಶೇರುಗಾರ ಅವರಿಗೆ ಕಪಾಳಕ್ಕೆ ಹೊಡೆದು ಕೆಳಗೆ ದೂಡಿದ್ದಾರೆ. ಸದಾನಂದ ಮದ್ದೋಡಿ ಮೇಲೂ ಹಲ್ಲೆ ನಡೆಸಿದ್ದು, ದೂರುದಾರ ರಮೇಶ ದುಬಾಶಿ ಅವರನ್ನೂ ಎದೆಗೆ ತಳ್ಳಿ ದುರ್ವರ್ತನೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share