ಶಿರಸಿ: ತಾಲೂಕಿನ ಮಲಳಿಯ ಮಂಜುನಾಥ ರಾಮಾ ಗೌಡ ಕೊಲೆ ಆರೋಪಿತನಾದ ವೆಂಕಟ್ರಮಣ ಗಣಪ ಗೌಡ ಮೇಲಿನ ಆಪಾದನೆ ರುಜುವಾತಾಗಿ̧ದ್ದು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ರೂ.10,000 ದಂಡ, ಮೃತನ ಹೆಂಡತಿಗೆ ರೂ.50,000 ಪರಿಹಾರ ನೀಡುವಂತೆ ಮತ್ತು ಹೆಚ್ಚಿನ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆಯಬಹುದೆಂದು ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ ಪೀಠಾಸೀನ ನ್ಯಾಯಾಧೀಶರಾದ ಕಿರಣ ಕಿಣಿ ತೀರ್ಪು ನೀಡಿದ್ದಾರೆ.
ಪ್ರಕರದ ಹಿನ್ನೆಲೆ: ಶಿರಸಿ ತಾಲೂಕಿನ ಮಳಲಿಯ ವೆಂಕಟರಮಣ ಗಣಪ ಗೌಡ ತನ್ನ ಮನೆ ಅಳಿಯ ಮೃತ ಮಂಜುನಾಥ ರಾಮ ಗೌಡನನ್ನು ಮನೆಯಿಂದ ಓಡಿಸಬೇಕು ಎನ್ನುವ ಉದ್ದೇಶದಿಂದ ಹಾಗೂ ತನಗೆ ಸರಾಯಿ ಕುಡಿಯಲು ಹಣ ಕೊಡುವುದಿಲ್ಲವೆಂದು ಜಗಳ ಮಾಡಿ, ದ್ವೇಷದಿಂದ ಇದ್ದವನು ದಿ.02-05-2024ರಂದು ಮನೆಯ ಜನರು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಯಾರೂ ಇಲ್ಲದ ಸಮಯ ನೋಡಿ ತಲೆಗೆ ಕಟ್ಟಿಗೆಯ ಬಡಿಗೆಯಿಂದ ಬಲವಾಗಿ ಹೊಡೆದ ಪರಿಣಾಮ ಸ್ಥಳದಲ್ಲೇ ಮರಣ ಹೊಂದುವAತೆ ಮಾಡಿ ಕೊಲೆ ಎಸಗಿರುತ್ತಾನೆ ಎಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿ ವಿಚಾರಣೆ ನಡೆಸಲಾಗಿತ್ತು.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಹೆಡ್ ಕಾನ್ಸ್ಟೇಬಲ್ ಮಹೇಶ ನಾಯ್ಕ ಹಾಗೂ ಕಾನ್ಸ್ಟೇಬಲ್ ಶಂಕರಾಚಾರಿ ಎನ್ ಇವರು ಸಾಕ್ಷಿ ವಿಚಾರಣೆಯ ಕಾಲಕ್ಕೆ ಸಾಕ್ಷಿದಾರರನ್ನು ಸಮಯೋಚಿತವಾಗಿ ಪ್ರಕರಣದಲ್ಲಿ ಹಾಜರುಪಡಿಸಿ ಆರೋಪಿತರನ್ನು ಶಿಕ್ಷೆಗೆ ಗುರಿಪಡಿಸುವಲ್ಲಿ ಸಹಕರಿಸಿದ್ದರು.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಆಭಿಯೋಜಕ ರಾಜೇಶ್ ಎಂ. ಮಳಗಿಕರ್ ಪ್ರಕರಣದ ವಿದ್ಯಮಾನಗಳನ್ನು ಮತ್ತು ಸಾಕ್ಷಿದಾರರ ಸಾಕ್ಷ್ಯವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿತನಿಗೆ ಶಿಕ್ಷೆ ವಿಧಿಸಬೇಕೆಂದು ಸುದೀರ್ಘ ವಾದ ಮಂಡಿಸಿದ್ದರು.