ಶಿರಸಿ: SSLC ಪರೀಕ್ಷೆಯಲ್ಲಿ ಶ್ಲಾಘನೀಯ ಸಾಧನೆ ಮಾಡಿದ ಶಿರಸಿಯ ಅಂಧ ವಿದ್ಯಾರ್ಥಿನಿ ಲೀಜಾ ಖಾನಮ್ ಇದೀಗ ವ್ಯವಸ್ಥೆಯ ಎಡವಟ್ಟಿನಿಂದ ಅನ್ಯಾಯಕ್ಕೆ ಒಳಗಾಗಿರುವ ಘಟನೆ ಬೆಳಕಿಗೆ ಬಂದಿದೆ.
ಶಿರಸಿ ನಗರದ ಇಂದಿರಾ ನಗರದಲ್ಲಿರುವ ಯುನಿಯನ್ ಉರ್ದು ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಲೀಜಾ ಖಾನಮ್, ಅಂಧತ್ವ ಇದ್ದರೂ ಕಠಿಣ ಪರಿಶ್ರಮದಿಂದ ಒಟ್ಟು 625 ಅಂಕಗಳಿಗೆ 526 ಅಂಕಗಳನ್ನು ಗಳಿಸಿ ಶೇ. 84.16 ಫಲಿತಾಂಶ ದಾಖಲಿಸಿದ್ದಾಳೆ.
ಆದರೆ ಎಸ್ಎಸ್ಎಲ್ಸಿ ಬೋರ್ಡ್ನ ತಾಂತ್ರಿಕ ದೋಷ ಅಥವಾ ನಿರ್ಲಕ್ಷ್ಯದ ತಪ್ಪಿನಿಂದ ಆಕೆಯನ್ನು ಫಲಿತಾಂಶ ಪಟ್ಟಿಯಲ್ಲಿ ‘FAIL’ (NC – Not Completed) ಎಂದು ತೋರಿಸಲಾಗಿದೆ. ಅಂಧ ವಿದ್ಯಾರ್ಥಿನಿಯಾಗಿರುವ ಹಿನ್ನೆಲೆಯಲ್ಲಿ ಲೀಜಾಗೆ ವಿಷಯ ವಿನಾಯ್ತಿ ನೀಡಲಾಗಿದ್ದು, ಗಣಿತ ಮತ್ತು ವಿಜ್ಞಾನ ವಿಷಯಗಳ ಬದಲು ಪೊಲಿಟಿಕಲ್ ಸೈನ್ಸ್ ಮತ್ತು ಎಕನಾಮಿಕ್ಸ್ ವಿಷಯಗಳಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು.
ಅದರಂತೆ ಆಕೆ ಸಮಾಜ ವಿಜ್ಞಾನ ಪರೀಕ್ಷೆಗೆ ಸಹ ಹಾಜರಾಗಿದ್ದರೂ, ಆಕೆಯನ್ನು ಹಾಜರಾಗಿಲ್ಲ ಎಂದು ದಾಖಲಿಸಿರುವುದು ಗಂಭೀರ ದೋಷವಾಗಿದೆ. ಪರೀಕ್ಷೆಗೆ ಹಾಜರಾದುದಕ್ಕೆ ಲೀಜಾ ಬಳಿ ಸ್ಪಷ್ಟ ಪುರಾವೆಗಳಿದ್ದು, ಪರೀಕ್ಷಾ ಪ್ರವೇಶ ಪತ್ರದ ಮೇಲೆ ಮೇಲ್ವಿಚಾರಕರ ಸಹಿಯೂ ಇದೆ. ಆದರೂ ಫಲಿತಾಂಶದಲ್ಲಿ ಆಕೆಯನ್ನು ಅನುತ್ತೀರ್ಣಳಾಗಿ ತೋರಿಸಿರುವುದು ಆಕೆಯ ಕುಟುಂಬವನ್ನು ದುಃಖಕ್ಕೆ ತಳ್ಳಿದೆ.
ಅಂಧತ್ವದ ನಡುವೆಯೂ ಶ್ರಮಪಟ್ಟು ಪರೀಕ್ಷೆ ಬರೆದಿದ್ದೇನೆ, ಆದರೆ ಈ ರೀತಿಯ ಅನ್ಯಾಯ ನಡೆದಿದೆ ಎಂದು ಲೀಜಾ ಖಾನಮ್ ನೋವು ವ್ಯಕ್ತಪಡಿಸಿದ್ದಾಳೆ. ಈ ಘಟನೆ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿತನ ಮತ್ತು ಪರಿಶೀಲನಾ ಕ್ರಮಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ತಕ್ಷಣವೇ ತಿದ್ದುಪಡಿ ಮಾಡಿ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.