ಉತ್ತರ ಪ್ರದೇಶ: ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಗಳು ಜ್ಯೋತಿಷ್ ಪೀಠದ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತೀ ಮಾಜೀಜಿಯವರನ್ನು ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಬಂಧಿಸಲು ಅವರ ನಿವಾಸಕ್ಕೆ ಸೋಮವಾರ ತೆರಳಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ನಾವು ಪೊಲೀಸರ ಕಾರ್ಯಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದಿಲ್ಲ. ಪೊಲೀಸರು ಏನು ಮಾಡುತ್ತಾರೆ ಎಂಬುದನ್ನು ಜನತೆ ನೋಡುತ್ತಿದ್ದಾರೆ ಎಂದು ಹೇಳಿದರು. ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಅವರು ಪ್ರತಿಕ್ರಿಯಿಸಿ, “ನಮ್ಮ ಪಾಲಿಗೆ ಮೂರು ನ್ಯಾಯಾಲಯಗಳಿವೆ-ಜನತೆ, ನಮ್ಮ ಅಂತರಾತ್ಮ ಮತ್ತು ದೇವರು. ಈ ಮೂರೂ ನ್ಯಾಯಾಲಯಗಳಿಂದ ನಮಗೆ ಕ್ಲೀನ್ ಚಿಟ್ ದೊರೆತಿದೆ” ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು, ಕಳೆದ ವಾರ ಜನ್ಸಿ ಪೊಲೀಸ್ ಸ್ಟೇಷನ್ನಲ್ಲಿ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ, ಅವರ ಶಿಷ್ಯ ಮುಕುಂದಾನಂದ ಬ್ರಹ್ಮಚಾರಿ ಹಾಗೂ ಇತರರ ವಿರುದ್ಧ ವಿಶೇಷ ಪೋಕ್ಸೋ ನ್ಯಾಯಾಲಯದ ನಿರ್ದೇಶನದ ಮೇರೆಗೆ ಎಫ್ಐಆರ್ ದಾಖಲಿಸಲಾಗಿತ್ತು. ಪ್ರಕರಣವನ್ನು ಶನಿವಾರ ರಾತ್ರಿ ಸುಮಾರು 11:30ರ ವೇಳೆಗೆ ನ್ಯಾಯಾಲಯದ ಆದೇಶದಂತೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 13, 2025ರಿಂದ ಫೆಬ್ರವರಿ 15, 2026ರವರೆಗೆ ನಡೆದಿದೆಯೆಂದು ಹೇಳಲಾದ ಘಟನೆಗಳ ಸಂಬಂಧ ಈ ಆರೋಪಗಳು ಕೇಳಿಬಂದಿವೆ. ದೂರಿನಲ್ಲಿ ಅಪ್ರಾಪ್ತರ ವಿರುದ್ಧ ಗಂಭೀರ ಲೈಂಗಿಕ ಅಪರಾಧದ ಆರೋಪಗಳು ಸೇರಿವೆ.
ವಿಶೇಷ ಪೋಕ್ಸೋ ನ್ಯಾಯಾಧೀಶ ವಿನೋದ್ ಕುಮಾರ್ ಚೌರಾಸಿಯಾ ಅವರು ಅಶುತೋಷ್ ಬ್ರಹ್ಮಚಾರಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿ ಆದೇಶ ಹೊರಡಿಸಿದ್ದರು. ನ್ಯಾಯಾಲಯ ತನ್ನ ಆದೇಶದಲ್ಲಿ ದೂರು, ಸಂತ್ರಸ್ತರ, ಸ್ವತಂತ್ರ ಸಾಕ್ಷಿಗಳ ಹೇಳಿಕೆಗಳು ಹಾಗೂ ಪ್ರಯಾಗರಾಜ್ ಸಹಾಯಕ ಪೊಲೀಸ್ ಆಯುಕ್ತರು ಸಲ್ಲಿಸಿದ ತನಿಖಾ ವರದಿಯನ್ನು ಪರಿಗಣಿಸಿದೆ.