Friday, July 24, 2026
Join WhatsApp Group
HomeLocal Newsಜಾಗೃತಿ ಫಲಕಗಳಲ್ಲಿ ದೊರೆಯಲಿವೆ ಸಹಾಯವಾಣಿ ಸಂಖ್ಯೆಗಳು

ಜಾಗೃತಿ ಫಲಕಗಳಲ್ಲಿ ದೊರೆಯಲಿವೆ ಸಹಾಯವಾಣಿ ಸಂಖ್ಯೆಗಳು

ಮಕ್ಕಳು, ಮಹಿಳೆಯರು, ವಯೋವೃದ್ಧರು ಹಾಗೂ ಸಾರ್ವಜನಿಕರಿಗೆ ಅತ್ಯಂತ ಅವಶ್ಯಕ ಸೇವೆಗಳನ್ನು ಒದಗಿಸುವ ಸರಕಾರದ ಪ್ರಮುಖ ಇಲಾಖೆಗಳು, ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಇಲಾಖೆಯ ನೆರವು ಪಡೆಯಲು, ಇಲಾಖೆಯನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗುವಂತೆ ಸಹಾಯವಾಣಿ ಸಂಖ್ಯೆಗಳನ್ನು ಹೊಂದಿದ್ದು, ಅವುಗಳಲ್ಲಿ ಕೆಲವೇ ಕೆಲವು ಸಹಾಯವಾಣಿ ಸಂಖ್ಯೆಗಳ ಬಗ್ಗೆ ಮಾತ್ರ ಸಾರ್ವಜನಿಕರಿಗೆ ತಿಳಿದಿವೆ. ಇನ್ನೂ ಹಲವು ಪ್ರಮುಖ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಸಮರ್ಪಕ ಮಾಹಿತಿ ಇಲ್ಲವಾಗಿದೆ. ಈ ಎಲ್ಲಾ ಸಹಾಯವಾಣಿ ಸಂಖ್ಯೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಒಂದೇ ಕಡೆಗಳಲ್ಲಿ ಒದಗಿಸುವ ವಿನೂತನ ಮತ್ತು ಅತ್ಯಂತ ಉಪಯುಕ್ತ ಕಾರ್ಯವನ್ನು ಉತ್ತರ ಜಿಲ್ಲಾಡಳಿತ ಕೈಗೊಂಡಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಆಹಾರ ನಾಗರಿಕ ಸರಬರಾಜು ನಿಗಮ ನಿ. ಹಾಗೂ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉತ್ತರ ಕನ್ನಡ ವತಿಯಿಂದ, ಪ್ರಮುಖ ಎಲ್ಲಾ ಸರಕಾರಿ ಇಲಾಖೆಗಳ ಸಹಾಯವಾಣಿ ಸಂಖ್ಯೆಗಳನ್ನು ಒಳಗೊಂಡ ಜಾಗೃತಿ ಫಲಕಗಳನ್ನು ಸಿದ್ಧಪಡಿಸಿದೆ.

ಈ ಜಾಗೃತಿ ಫಲಕಗಳಲ್ಲಿ ಉತ್ತರ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಸಹಾಯವಾಣಿ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ರಾಷ್ಟ್ರೀಯ ಗ್ರಾಹಕರ ಸಹಾಯವಾಣಿ, ಆಧಾರ ಕಾರ್ಡ ಸಹಾಯವಾಣಿ ಭಾರತದ ಚುನಾವಣೆ ಆಯೋಗ ಸಹಾಯವಾಣಿ, ಮಕ್ಕಳ ಸಹಾಯವಾಣಿ, ಮಹಿಳಾ ಸಹಾಯವಾಣಿ, ಹಿರಿಯ ನಾಗರಿಕರ ಸಹಾಯವಾಣಿ, ಪೊಲೀಸ್ ಸಹಾಯವಾಣಿ ವೈದ್ಯಕೀಯ ತುರ್ತು ಆಂಬುಲೆನ್ಸ್ ಸೇವೆ, ಎಲ್‌ಪಿಜಿ ತುರ್ತು ಸಹಾಯವಾಣಿ, ವಿದ್ಯುತ್ ಸಹಾಯವಾಣಿ, ಅಗ್ನಿಶಾಮಕ ದಳ ಸಹಾಯವಾಣಿ, ಸೈಬರ್ ಕೈಂ ಸಹಾಯವಾಣಿ, ಉಚಿತ ಕಾನೂನು ಸೇವೆ, ಪ್ರಾಣಿಗಳ ರಕ್ಷಣೆ ಮತ್ತು ಕಲ್ಯಾಣ ಸಹಾಯವಾಣಿ, ಆರೋಗ್ಯ ಸಹಾಯವಾಣಿ, ಅರಣ್ಯ ಸಹಾಯವಾಣಿ, ಕೃಷಿ ಸಹಾಯವಾಣಿ, ರಾಷ್ಟ್ರೀಯ ಹೆದ್ದಾರಿ ತುರ್ತು ಸಹಾಯವಾಣಿ ಮಾನಸಿಕ ಆರೋಗ್ಯ ಸಹಾಯವಾಣಿಯ ಸಂಖ್ಯೆಗಳನ್ನು ಮುದ್ರಿಸಲಾಗಿದ್ದು, ಪ್ರತಿಯೊಬ್ಬ ಸಾರ್ವಜನಿಕರೂ ಯಾವುದೇ ಸಂದರ್ಭದಲ್ಲಿ ಸಹಾಯವಾಣಿಯನ್ನು ಸಂಪರ್ಕಿಸಲು ಇದು ಸಹಕಾರಿಯಾಗಲಿದೆ.

ಈ ಸಹಾಯವಾಣಿ ಸಂಖ್ಯೆಗಳ ಮೂಲಕ ವಿವಿಧ 21 ಇಲಾಖೆಗಳಲ್ಲಿರುವ ಕಾರ್ಯಕ್ರಮಗಳ ವಿವರಗಳು ಸೇರಿದಂತೆ ಈ ಇಲಾಖೆಗಳಿಂದ ಅಗತ್ಯ ನೆರವು ಪಡೆಯುವ ಕುರಿತು ಸಾರ್ವಜನಿಕರು ಕರೆ ಮಾಡಬಹುದಾಗಿದ್ದು, ಪ್ರಮುಖವಾಗಿ ಪೊಲೀಸ್, ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ, ಮಹಿಳೆ, ಮಕ್ಕಳು ಮತ್ತು ಹಿರಿಯ ನಾಗರೀಕರ ರಕ್ಷಣೆ ಮತ್ತು ಸೇವೆಗಳು, ಸೈಬರ್ ವಂಚನೆ ದೂರು ದಾಖಲಿಸಲು ಕೂಡಾ ಅಗತ್ಯವಿರುವ ಸಹಾಯವಾಣಿಗಳ ವಿವರಗಳು ಇದರಲ್ಲಿವೆ. ಈ ಜಾಗೃತಿ ಫಲಕಗಳನ್ನು ಜಿಲ್ಲೆಯಾದ್ಯಂತ ಸಾರ್ವಜನಿಕರ ಪ್ರಯೋಜನಕ್ಕೆ ಅನುಕೂಲವಾಗುವಂತೆ, ಸಾರ್ವಜನಿಕರು ಅವಶ್ಯಕವಾಗಿ ಭೇಟಿ ನೀಡುವ ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲಾ ಪಡಿತರ ವಿತರಣಾ ಕೆಂದ್ರಗಳಲ್ಲಿ ಹಾಗೂ ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲಾಗುತ್ತಿದೆ.

ಸಹಾಯವಾಣಿ ಸಂಖ್ಯೆಗಳನ್ನು ಒಳಗೊಂಡ ಜಾಗೃತಿ ಫಲಕಗಳನ್ನು ಸಾಂಕೇತಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವರು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಬಿಡುಗಡೆಗೊಳಿಸಿದ್ದು, ಈ ಫಲಕಗಳನ್ನು ಜಿಲ್ಲೆಯ 409 ಪಡಿತರ ವಿತರಣಾ ಕೇಂದ್ರಗಳಿಗೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್, ತಹಸೀಲ್ದಾರ್ ಕಚೇರಿಗಳು ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಶೀಘ್ರದಲ್ಲಿ ಅಳವಡಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ಸರಕಾರಿ ಇಲಾಖೆಗಳ ಅತ್ಯಂತ ಉಪಯುಕ್ತವಾದ ಈ ಸಹಾಯವಾಣಿ ಸಂಖ್ಯೆಗಳ ಪ್ರಯೋಜನ ಪಡೆಯಬೇಕು ಎನ್ನುತ್ತಾರೆ ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮಂಜುನಾಥ ರೇವಣಕರ್.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share