ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಸುಚೇತಾ ಮದ್ಗುಣಿ
ಯಲ್ಲಾಪುರ: ಮಹಿಳೆಯು ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನದೇ ಆದ ಛಾಪು ಮೂಡಿಸುತ್ತಿದಾಳೆ. ತಾನೂ ಏನಾದರೂ ಸಾದಿಸಬೇಕಂಬ ಛಲಕ್ಕಾಗಿ ತನ್ನ ಬಾವನೆಗಳಿಗೆ ಸ್ಪಂದಿಸುವದರ ಮೂಲಕ ತನ್ನನ್ನು ತಾನು ಗೌರವಿಸಿಕೊಳ್ಳುವಂತಾಗಬೇಕು. ನಮ್ಮಲ್ಲಿನ ಸಾಧನೆಗಾಗಿ ಶಿಸ್ತು ಹಾಗೂ ಬದ್ಧತೆಯನ್ನು ಹೊದಿರಬೇಕು ಎಂದು ಡಾ. ಜಿ.ಪಿ. ಭಟ್ಟ ಮದ್ಗುಣಿ ಸ್ಮಾರಕ ಆಯುರ್ವೇದ ಸೇವಾ ಭವನದ ವೈದ್ಯೆ ಡಾ. ಸುಚೇತಾ ಮದ್ಗುಣಿ ಹೇಳಿದರು.
ಚೇತನಾ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ ಯಲ್ಲಾಪುರ, ಜ್ಞಾನ ಜ್ಯೋತಿ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ ಮುಂಡಗೋಡ ಹಾಗೂ ಟೀಡ್ ಟ್ರಸ್ಟ್ ಯಲ್ಲಾಪುರ ಇವರ ಸಂಯುಕ್ತಾಶ್ರಯದಲ್ಲಿ ಶಾರದಾ ಗಲ್ಲಿಯ ಶಿವಪ್ಪ ಪೂಜಾರಿ ಗ್ರಾಮೀಣಾಭಿವೃದ್ಧಿ ಸಂಪನ್ಮೂಲ ಕೇಂದ್ರದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವಂತ ಕುಟುಂಬಗಳು ಇದ್ದಾಗ ಮಾತ್ರ ಆರೋಗ್ಯವಂತ ಸಮುದಾಯ ಇರಲು ಸಾಧ್ಯ ಎಂಬ ನಿಟ್ಟಿನಲ್ಲಿ ಮಹಿಳೆಯು ಪ್ರತಿ ಹಂತದಲ್ಲೂ ತನ್ನ ಆಸೆ-ಆಕಾಂಕ್ಷೆ ಗಳನ್ನು ಬದಿಗಿಟ್ಟು ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಮಾತ್ರ ಹೆಚ್ಚು ಕಾಳಜಿವಹಿಸುತ್ತಿದ್ದು, ಇತರರ ಆರೋಗ್ಯದ ಜೊತೆ ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಮುಖ್ಯ ಅತಿಥಿಗಳಾದ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಮಾತನಾಡಿ, ಮಹಿಳೆಯರು ಹೆಚ್ಚಿನ ತ್ಯಾಗಜೀವಿಗಳು. ಮಹಿಳೆಯು ತನ್ನ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಸಂಸಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬದುಕುತ್ತಾಳೆ. ಪುರುಷ ಪ್ರಧಾನ ಸಮಾಜವಾಗಿರುವದರಿಂದ ತಮ್ಮ ಸಾಮರ್ಥ್ಯಗಳನ್ನು ಹೊರ ಹಾಕಲು ಸಾಧ್ಯವಾಗುತ್ತಿಲ್ಲ. ಹೆಣ್ಣುಮಕ್ಕಳಿಗಾಗಿ, ಮಹಿಳೆಯರಿಗಾಗಿ ಸರಕಾರದಿಂದ ಹೆಚ್ಚು ಸೌಲಭ್ಯಗಳ ಕಾನೂನು ಇದ್ದು ಮಾಹಿತಿ ನೀಡುವ ಕಾರ್ಯ ಸರಕಾರದಿಂದ ಆಗಬೇಕು ಎಂದರು.
ಶಿಕ್ಷಣ ಸಂಯೋಜಕ ಸುಧಾಕರ್ ನಾಯಕ್ ಮಾತನಾಡಿ, ಒಳ್ಳೆಯ ಕೆಲಸ ಒಳ್ಳೆಯ ವ್ಯಕ್ತಿತ್ವವನ್ನು ರಚಿಸಿಕೊಳ್ಳಲು ಸಹಾಯಕವಾಗುತ್ತದೆ. ಮಕ್ಕಳ ಕಲಿಕೆ ಬಗ್ಗೆ ಎಲ್ಲಾ ಪಾಲಕರು ಜಾಗರೂಕತೆ ವಹಿಸಿಕೊಂಡು ಮಕ್ಕಳಿಗೆ ಹೆಚ್ಚಿನ ಜ್ಞಾನವನ್ನು ಕೊಡಬೇಕು ಎಂದರು.
ಟೀಡ್ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಮೋಹಿನಿ ಪೂಜಾರಿ ಮಾತನಾಡಿ, ಸಂಸ್ಥೆಯ ಮಾರ್ಗದರ್ಶನದಲ್ಲಿ ಮಹಿಳೆಯ ಮೂಲಕ ನಾವು ಕುಟುಂಬಗಳ ಸಬಲೀಕರಣಕ್ಕಾಗಿ ಸೇವೆ ಸಲ್ಲಿಸಿದ್ದೇವೆ. ಸಮಾಜದ ಸಮಸ್ಯೆಗಳಿಗೆ ಎಲ್ಲರೂ ಒಟ್ಟಾಗಿ ಹೋಗುವಂತೆ ವೇದಿಕೆಗಳನ್ನು ಕಲ್ಪಿಸಿ ಕೊಟ್ಟಿದ್ದೇವೆ ಎಂದರು.
ಪೊಲೀಸ್ ಇಲಾಖೆಯ ಅಕ್ಕ ಪಡೆಯ ಅಧಿಕಾರಿ ರೇಣುಕಾ ಬರಗಟ್ಟಿ ಹಾಗೂ ಮುಕ್ತಾ ಸೂರ್ಯವಂಶ ಕಾನೂನು ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಲಕ್ಷ್ಮಿ ಸಿದ್ದಿ ಹಾಗೂ ಲಕ್ಷ್ಮಿ ಗೌಡ ತಮ್ಮ ಅನುಭವವನ್ನು ಹಂಚಿಕೊಂಡರು.
ಚೇತನಾ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಕಾಮಾಕ್ಷಿ ರಾಯ್ಕರ್ ಅಧ್ಯಕ್ಷತೆ ವಹಿಸಿದ್ದರು . ವೇದಿಕೆಯಲ್ಲಿ ಮುಂಡಗೋಡನ ಜ್ಞಾನ ಜ್ಯೋತಿ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಗುತ್ತೇವ್ವ ಮನ್ನೂರು ಉಪಸ್ಥಿತರಿದ್ದರು.
ರೇಖಾ ಘಾಡಿ ಪ್ರಾರ್ಥಿಸಿದರು, ಲಲಿತಾ ಮರಾಟಿ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಸರೋಜಾ ಮಿರಾಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನಯಾ ಚಂದ್ಗುಳಿಕರ ವಂದಿಸಿದರು. ಸುಜಾತಾ ನಾಯ್ಕ ನಿರೂಪಿಸಿದರು. ಟೀಡ್ ಸಿಬ್ಬಂದಿ ಬಮ್ಮು ತೋರತ, ನರಸಿಂಹ ಸಿದ್ದಿ, ಗೀತಾ ನೆರಲಗಿ ಸಹಕರಿಸಿದರು.