ಯಲ್ಲಾಪುರ: ತಾಲೂಕಿನ ಆನಗೋಡಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅಷ್ಟಬಂಧ ಮಹೋತ್ಸವವು ಬುಧವಾರದಿಂದ ವೈಭವವಾಗಿ ಆರಂಭಗೊಂಡಿತು.
ಗೋಕರ್ಣದ ತಾಂತ್ರಿಕ ವಿದ್ವಾನ್ ಗಣಪತಿ ಗಜಾನನ ಹಿರೇ ಅವರ ವೈದಿಕ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಬ್ರಹ್ಮಕೂರ್ಚ ಹವನ, ಮಹಾಸಂಕಲ್ಪ, ಗಣಪತಿ ಪೂಜೆ, ನಾಂದಿ-ಪುಣ್ಯಾಹ, ಕೌತುಕ ಪೂಜೆ, ಕೃಚ್ಛಾಚರಣೆ, ಋತ್ವಿಗ್ವರಣ, ಮಧುಪರ್ಕ, ಕೌತುಕಬಂಧನ, ಅಷ್ಟಮೂರ್ತಿ ಪ್ರಾರ್ಥನೆ, ಜಲಾಧಿವಾಸ, ಯಾಗಶಾಲಾ ಪ್ರವೇಶ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ಮಂಟಪ ಸಂಸ್ಕಾರ, ಮಂಡಲ ದರ್ಶನ, ರಾಕ್ಷೋಘ್ನ, ವಾಸ್ತುಶಾಂತಿ, ಅಧಿವಾಸ, ಉದಕಶಾಂತಿ ಹಾಗೂ ವಾಸ್ತುಬಲಿ ಸೇರಿದಂತೆ ವಿವಿಧ ವಿಧಿವಿಧಾನಗಳು ನಡೆದವು.
ರಂಜಿಸಿದ ಭಕ್ತಿಸಂಗೀತ:
ಅಷ್ಟಬಂಧ ಮಹೋತ್ಸವದ ಅಂಗವಾಗಿ ಸುದರ್ಶನ ಸಭಾಭವನದಲ್ಲಿ ಭಕ್ತಿಸಂಗೀತ ಕಾರ್ಯಕ್ರಮ ನಡೆಯಿತು. ಹಿಂದುಸ್ಥಾನಿ ಗಾಯಕರಾದ ವಾಣಿ ರಮೇಶ್ ಹೆಗಡೆ, ಗಣೇಶ ಹೆಗಡೆ ನೆರ್ಲೆಮನೆ ಹಾಗೂ ವಿದ್ವಾನ್ ಗಣಪತಿ ಹೆಗಡೆ ಯಲ್ಲಾಪುರ ಭಕ್ತಿಗಾನವನ್ನು ನಡೆಸಿಕೊಟ್ಟರು.
ಇವರಿಗೆ ಗಣೇಶ್ ಗುಂಡ್ಕಲ್ ಹಾಗೂ ಪ್ರದೀಪ್ ಕೋಟೆಮನೆ ತಬಲಾ ವಾದನದಲ್ಲಿ ಸಹಕಾರ ನೀಡಿದರೆ, ಗಣಪತಿ ಹೆಗಡೆ ಮತ್ತು ಸತೀಶ ಹೆಗ್ಗಾರ್ ಹಾರ್ಮೋನಿಯಂ ಸಾಥ್ ನೀಡಿದರು. ಕಾರ್ಯಕ್ರಮವನ್ನು ಕೆ.ಎಸ್. ಭಟ್ಟ ಸ್ವಾಗತಿಸಿ ನಿರ್ವಹಿಸಿದರು.