ಶಿರಸಿ: ಅನಾದಿಕಾಲದಿಂದ ಬಳಸಿಕೊಂಡು ಬರುತ್ತಿದ್ದ ಕೃಷಿ ಜಮೀನಿನ ಸಂಪರ್ಕ ರಸ್ತೆಯನ್ನು ಜೆಸಿಬಿ ಬಳಸಿ ಅಗೆದು ಹಾನಿಗೊಳಿಸಿದ್ದಲ್ಲದೆ, ತಡೆಯಲು ಹೋದ ರೈತನನ್ನು “ಜೆಸಿಬಿ ಕೆಳಗೆ ಹಾಕಿ ಇಲ್ಲೇ ಹೂತುಹಾಕುತ್ತೇವೆ” ಎಂದು ಜೀವ ಬೆದರಿಕೆ ಹಾಕಿದ ಆರೋಪದಡಿ ಬನವಾಸಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಹೊಸಕೊಪ್ಪ ಗ್ರಾಮದ ಸುಭಾಷ್ ಬಂಗಾರಪ್ಪ ಗೌಡ ಕಡ್ಲೇರ್ (59) ಅವರು ತಮ್ಮ ಕೃಷಿ ಜಮೀನಿಗೆ ಸಂಪರ್ಕ ಕಲ್ಪಿಸುವ ವಹಿವಾಟು ರಸ್ತೆಯನ್ನು ಹಲವು ವರ್ಷಗಳಿಂದ ಬಳಸಿಕೊಂಡು ಬರುತ್ತಿದ್ದರು. ಇದೇ ರಸ್ತೆಯ ಮೂಲಕ ಕೃಷಿ ಸಲಕರಣೆ, ವಾಹನ ಹಾಗೂ ಆಳುಕಾಳುಗಳ ಸಂಚಾರವೂ ನಡೆಯುತ್ತಿತ್ತು.
ಆದರೆ, ಇದೇ ರಸ್ತೆಯ ವಿಚಾರವಾಗಿ ದ್ವೇಷ ಹೊಂದಿದ್ದ ಆರೋಪಿತರು ಮೊದಲೇ ಸಂಚು ರೂಪಿಸಿ, 2026ರ ಜನವರಿ 16ರಂದು ಮಧ್ಯಾಹ್ನ ಜೆಸಿಬಿ ಯಂತ್ರ ಬಳಸಿ ರಸ್ತೆಯನ್ನು ಅಗೆದು ಹಾಳು ಮಾಡಿದ್ದು, ಜಮೀನಿಗೆ ಅಳವಡಿಸಿದ್ದ ಪೈಪ್ಲೈನ್ಗೂ ಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವೇಳೆ ಸುಭಾಷ್ ಗೌಡ ಅವರು ತಮ್ಮ ಅಣ್ಣ ಜಯರಾಜ್ ಗೌಡ ಹಾಗೂ ಅಣ್ಣನ ಮಗ ಪ್ರದೀಪ್ ಜಯರಾಜ್ ಗೌಡ ಅವರೊಂದಿಗೆ ಸ್ಥಳಕ್ಕೆ ತೆರಳಿ, ರಸ್ತೆ ಮತ್ತು ಪೈಪ್ಲೈನ್ಗೆ ಹಾನಿ ಮಾಡದಂತೆ ಮನವಿ ಮಾಡಿದ್ದಾರೆ. ಆದರೆ ಆರೋಪಿತರು ಅವಾಚ್ಯ ಶಬ್ದಗಳಿಂದ ನಿಂದಿಸಿ, “ಅಡ್ಡ ಬಂದರೆ ಜೆಸಿಬಿ ಕೆಳಗೆ ಹಾಕಿ ಇಲ್ಲೇ ಮುಗಿಸಿಬಿಡುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಆರೋಪಿತರ ಸೂಚನೆಯಂತೆ ಜೆಸಿಬಿ ಚಾಲಕ ಯಂತ್ರವನ್ನು ಅವರತ್ತ ಚಲಾಯಿಸಿದ್ದು, ಗಾಬರಿಗೊಂಡು ಮೂವರು ಪಕ್ಕಕ್ಕೆ ಸರಿದಿದ್ದಾರೆ. ಬಳಿಕ ಮತ್ತೊಮ್ಮೆ “ಪೊಲೀಸ್ ಸ್ಟೇಷನ್ಗೆ ಹೋದರೂ ದಾರಿಯಲ್ಲೇ ಹೆಣ ಮಲಗಿಸುತ್ತೇವೆ” ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ಘಟನೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸುವ ಉದ್ದೇಶದಿಂದ ಅಗೆದ ಮಣ್ಣನ್ನು 3ರಿಂದ 4 ಟ್ರಾಕ್ಟರ್ಗಳಲ್ಲಿ ಬೇರೆಡೆ ಸಾಗಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದಲ್ಲಿ ಮಲ್ಲಿಕಾರ್ಜುನ ಚನ್ನವೀರಯ್ಯ ಹಿರೇಮಠ, ಚಂದ್ರ ಬಂಗಾರ್ಯ ಚನ್ನಯ್ಯ, ಮಂಜುನಾಥ ಈರಪ್ಪಗೌಡ ಚಕ್ಕೋಡರ, ದಿನೇಶ್ ಸಕಾರಾಮ ಹಳ್ಳಿಕೊಪ್ಪ ಹಾಗೂ ಸಿದ್ದು ಮಲ್ಲಿಕಾರ್ಜುನ ನಲ್ಲಿಕೊಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.