ಯಲ್ಲಾಪುರ: ತಾಲೂಕಿನ ಆನಗೋಡದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಷ್ಟಬಂಧ ಮಹೋತ್ಸವದ ಅಂಗವಾಗಿ 2ನೇ ದಿನವಾದ ಗುರುವಾರ ವಿವಿಧ ಧಾರ್ಮಿಕ ವಿಧಿವಿಧಾನಗಳು ಹಾಗೂ ಭಕ್ತಿ-ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಗೋಕರ್ಣದ ವೇ.ಮೂ ಗಣಪತಿ ಭಟ್ಟ ಹಿರೆ ಅವರ ವೈದಿಕತ್ವದಲ್ಲಿ ಪುಣ್ಯಾಹ, ಕಲಶ ಸ್ಥಾಪನೆ, ಅಗ್ನಿಜನನ, ಅಗ್ನಿಸಂಸ್ಕಾರ, ಸ್ಥಾನಶುದ್ಧಿ ಹವನ, ಪೂಜಾ ಹವನ, ಬಿಂಬಶುದ್ಧಿ, ನವಗ್ರಹ ಹವನ, ಪ್ರಾಯಶ್ಚಿತ್ತ, ಶಾಂತಿ ಹವನ, ಗಣಪತ್ಯಥರ್ವಶಿರ್ಷ ಹವನ, ಶ್ರೀಸೂಕ್ತ ಮತ್ತು ಪುರುಷಸೂಕ್ತ ಪಾರಾಯಣ ಸೇರಿದಂತೆ ಹಲವು ಪೂಜಾ ವಿಧಿಗಳು ನಡೆದವು.
ಇದೇ ಸಂದರ್ಭದಲ್ಲಿ ಶಯ್ಯಾಧಿವಾಸ, ಚಕ್ರಾಬ್ಜ ಮಂಡಲಪೂಜೆ, ಪರಿಹವನ, ಪ್ರತಿಷ್ಠಾಪೂರ್ವಾಂಗ ಹವನ ಹಾಗೂ ಅಷ್ಟಾವಧಾನ ಸೇವೆಗಳು ನೆರವೇರಿದವು.
ಭಕ್ತಿಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು:
ಮಹಾಗಣಪತಿ ಭಜನಾ ಮಂಡಳಿ ಹಾಗೂ ಯಲ್ಲಾರಗದ್ದೆ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಪ್ರಭಾತ ಭಟ್ಟ ಹಾರ್ಮೋನಿಯಂ, ಅನಂತ ಮುರಳೀಧರ ನಾಯಕ ಹಲಸ್ಕಂಡ ತಬಲಾ ಸಹಕಾರ ನೀಡಿದರು.
ಬಾಲ ಪ್ರತಿಭೆ ಪ್ರತಿಕ್ಷಾ ನರಸಿಂಹ ಗಾಂವ್ಕರ್ ವಡಗಿರಪಾಲ ಕೊಳಲು ವಾದನ ನೀಡಿ ಭಕ್ತರ ಮೆಚ್ಚುಗೆಗೆ ಪಾತ್ರರಾದರು. ಬಳಿಕ ಈಶ್ವರದಾಸ ಕೊಪ್ಪೆಸರ ಅವರಿಂದ ಹರಿಕೀರ್ತನೆ ನಡೆಯಿತು.
ಏ. 10ರ ಕಾರ್ಯಕ್ರಮಗಳು: ಶುಕ್ರವಾರ ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ, ಪೂಜಾ ಹವನ ಹಾಗೂ ಶತರುದ್ರ ಪಾರಾಯಣ ನಡೆಯಲಿದೆ. ಬಳಿಕ ಬೆಳಿಗ್ಗೆ 11.56ಕ್ಕೆ ಸಲ್ಲುವ ಮಿಥುನ ಲಗ್ನದಲ್ಲಿ ದೇವತಾ ಪ್ರತಿಷ್ಠೆ, ಶಿಖರ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ನೆರವೇರಲಿದೆ.
ಅದೇ ದಿನ ಕಲಾವೃದ್ಧಿ ಹವನ, ವೀರಭದ್ರ ಮೂಲಮಂತ್ರ ಜಪ, ಪವಮಾನ ಪಾರಾಯಣ, ದತ್ತಾತ್ರೇಯ ಮೂಲಮಂತ್ರ ಜಪ, ಸರ್ಪಸೂಕ್ತ, ಜಟ್ಟಿಗ ಮೂಲಮಂತ್ರ ಜಪ, ಅಸ್ತ್ರೇಶ ಜಪ, ಷಡದ್ವನ್ಯಾಸ ಹಾಗೂ ಜೀವ ಕಲಶಾಭಿಷೇಕ ಅಷ್ಟಾವಧಾನ ಸೇವೆಗಳು ನಡೆಯಲಿವೆ.
ಮಧ್ಯಾಹ್ನ 3 ಗಂಟೆಯಿಂದ ಯಕ್ಷಗಾನ-ಕುಂಚನರ್ತನ ಕಾರ್ಯಕ್ರಮ ನಡೆಯಲಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿಗೆ, ವೆಂಕಟ್ರಮಣ ಭಟ್ಟ ಚಂದಗುಳಿ ಪಾಲ್ಗೊಳ್ಲಲಿದ್ದು, ನರಸಿಂಹ ಭಟ್ಟ ಹಂಡ್ರಮನೆ, ಪ್ರಮೋದ ಹೆಗಡೆ ಕಬ್ಬಿನಗದ್ದೆ ಮದ್ದಳೆ, ಚಂಡೆಯಲ್ಲಿ ಸಾಥ್ ನೀಡುವರು.
ಕುಂಚನರ್ತನದಲ್ಲಿ ಹಿರಿಯ ಚಿತ್ರಕಲಾವಿದ ನೀರ್ನಳ್ಳಿ ಗಣಪತಿ ಹಾಗೂ ಸತೀಶ ಯಲ್ಲಾಪುರ ಭಾಗವಹಿಸಲಿದ್ದು, ಡಾ. ದತ್ತಾತ್ರಯ ಗಾಂವ್ಕಾರ್ ವ್ಯಾಖ್ಯಾನ ನೀಡಲಿದ್ದಾರೆ.