ಯಲ್ಲಾಪುರ: ಸ್ಕೂಟಿ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ವಾರದ ಕಾಲ ಚಿಕಿತ್ಸೆ ಪಡೆದರೂ ಬದುಕುಳಿಯದೇ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಂಡೇಲಿಯ ಗಾಂಧಿನಗರ ನಿವಾಸಿಗಳಾದ ಸಾವಂತಕುಮಾರ ಬಸಪ್ಪ ಬೋವಿವಡ್ಡರ ಹಾಗೂ ಅವರ ಪತ್ನಿ ಲಕ್ಷ್ಮಿ ಬೋವಿವಡ್ಡರ ಜುಲೈ 6ರಂದು ಕೆಲಸದ ನಿಮಿತ್ತ ಚಿಕ್ಕಮಗಳೂರಿನ ಕೊಪ್ಪಕ್ಕೆ ಸ್ಕೂಟಿಯಲ್ಲಿ ತೆರಳಿದ್ದರು. ಕೆಲಸ ಮುಗಿಸಿ ಜುಲೈ 7ರಂದು ರಾತ್ರಿ ಶಿರಸಿ–ಉಮ್ಮಚಗಿ ಮಾರ್ಗವಾಗಿ ವಾಪಸ್ಸಾಗುತ್ತಿದ್ದ ವೇಳೆ, ಯಲ್ಲಾಪುರ ತಾಲೂಕಿನ ಉಮ್ಮಚಗಿ ಸಮೀಪ ಸ್ಕೂಟಿ ಸ್ಕಿಡ್ ಆಗಿ ಅಪಘಾತಕ್ಕೊಳಗಾಗಿದ್ದರು.
ಅಪಘಾತದಲ್ಲಿ ಹಿಂಬದಿ ಕುಳಿತಿದ್ದ ಲಕ್ಷ್ಮಿ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಸಾರ್ವಜನಿಕರ ನೆರವಿನಿಂದ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಜುಲೈ 14ರಂದು ಸಂಜೆ ಲಕ್ಷ್ಮಿ ಅವರು ಮೃತಪಟ್ಟಿದ್ದಾರೆ.
ಈ ಸಂಬಂಧ ವಾಹನವನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ ಆರೋಪದಡಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.