ಬೆಂಗಳೂರು: ನಗರದ ವಿವಿಧ ಪ್ರದೇಶಗಳಲ್ಲಿ ಅರ್ಚಕರು ಹಾಗೂ ಭಕ್ತರನ್ನು ಗುರಿಯಾಗಿಸಿಕೊಂಡು ವಂಚನೆ ನಡೆಸಿದ ಆರೋಪದಡಿ ವ್ಯಕ್ತಿಯೋರ್ವನನ್ನು ರಾಜಾಜಿನಗರ ಪೊಲೀಸರು ಬಂಧಿಸಿರುವ ಮಾಹಿತಿ ಲಭ್ಯವಾಗಿದೆ.
ಬಂಧಿತನನ್ನು ಪ್ರವೀಣ್ ಭಟ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಆತ ದೇವಸ್ಥಾನಗಳಿಗೆ ತೆರಳಿ ಹೆಚ್ಚಿನ ಮೊತ್ತದ ದಕ್ಷಿಣೆ ನೀಡುವ ಮೂಲಕ ಅರ್ಚಕರ ವಿಶ್ವಾಸ ಗಳಿಸುತ್ತಿದ್ದನೆಂದು ಹೇಳಲಾಗಿದೆ.
ಬಳಿಕ ಪರಿಚಯ ಬೆಳೆಸಿ, ಮನೆಗಳಲ್ಲಿ ವಿಶೇಷ ಪೂಜೆ ಇದೆ ಎಂದು ಹೇಳಿ, ಮುತ್ತೈದೆಯರ ಪೂಜೆಗೆ ಮಹಿಳೆಯರನ್ನು ಕಳುಹಿಸುವಂತೆ ಕೇಳುತ್ತಿದ್ದನೆಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಒಬ್ಬ ವ್ಯಕ್ತಿಯನ್ನು ಸಂಪರ್ಕಿಸಿ ಅವರ ಮನೆಯ ಮಹಿಳೆಯರನ್ನು ಪೂಜೆಯ ಹೆಸರಿನಲ್ಲಿ ಕಳುಹಿಸಲು ಕೇಳಿದ ಪ್ರಕರಣವೂ ಬೆಳಕಿಗೆ ಬಂದಿದೆ.
ಮಹಿಳೆಯರು ಸೂಚಿಸಿದ ಸ್ಥಳಕ್ಕೆ ತೆರಳಿದ ಬಳಿಕ, ಅವರ ಬಳಿ ಇದ್ದ ಚಿನ್ನಾಭರಣಗಳನ್ನು ಪಡೆದು ವಂಚನೆ ಎಸಗಿದ್ದಾನೆಂದು ಆರೋಪಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದೇ ರೀತಿಯ ಇನ್ನೂ ಕೆಲವು ಪ್ರಕರಣಗಳಲ್ಲಿ ಆರೋಪಿಯು ಭಾಗವಹಿಸಿರುವ ಶಂಕೆ ವ್ಯಕ್ತವಾಗಿದೆ. ನಗರದ ವಿವಿಧ ಠಾಣೆಗಳಲ್ಲಿ ಐದಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದಾಗಿ ಮೂಲಗಳು ತಿಳಿಸಿವೆ.
ಪ್ರಸ್ತುತ ರಾಜಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಆರೋಪಿ ಪ್ರವೀಣ್ ಭಟ್ ಮೂಲತಃ ಎಲ್ಲಿಯವನು, ಇನ್ನಷ್ಟು ಪ್ರಕರಣಗಳಲ್ಲಿ ಸಂಪರ್ಕವಿದೆಯೇ ಎಂಬ ಮಾಹಿತಿಗಳು ತಿಳಿದುಬರಬೇಕಿದೆ.