ಬೆಂಗಳೂರು: ಗಲ್ಫ್ ಪ್ರದೇಶದ ಉದ್ವಿಗ್ನತೆಯ ನಡುವೆಯೇ ರಾಜ್ಯದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ ತೀವ್ರಗೊಂಡಿದ್ದು, ಸಾರ್ವಜನಿಕರು ಹಾಗೂ ವಾಣಿಜ್ಯ ವಲಯದ ಮೇಲೆ ಪರಿಣಾಮ ಬೀರಿದೆ.
ಹೋಟೆಲ್ಗಳು, ಕೈಗಾರಿಕೆಗಳು ಸಿಲಿಂಡರ್ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದರೆ, ಹಲವು ಕಡೆ ಜನರು ಖಾಲಿ ಸಿಲಿಂಡರ್ ಹಿಡಿದು ಏಜೆನ್ಸಿಗಳ ಮುಂದೆ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ ಆಹಾರ ಸಚಿವ K H Muniyappa ನೀಡಿರುವ “ಸೌದೆ ಒಲೆ ಬಳಸಿ” ಎಂಬ ಸಲಹೆ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನಿಂದ ಸುಮಾರು 40 ಕಿ.ಮೀ ದೂರ ಹೋದರೆ ಕಟ್ಟಿಗೆ ಲಭ್ಯವಿದ್ದು, ಅರಣ್ಯದ ಹಸಿ ಮರಗಳನ್ನು ಕಡಿದು ಬಳಸದೆ, ಒಣ ಕಟ್ಟಿಗೆಗಳಿಂದ ಅಡುಗೆ ಮಾಡುವಂತೆ ಸಚಿವರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಉಂಟಾದ ಸಿಲಿಂಡರ್ ಕೊರತೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿರುವ ಸಚಿವರು, ಪ್ರಸ್ತುತ ಅಗತ್ಯದ ಕೇವಲ ಶೇ. 40ರಷ್ಟು ಮಾತ್ರ ಪೂರೈಕೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನು ತಡೆಯಲು ರಾಜ್ಯಾದ್ಯಂತ ಹೆಚ್ಚುವರಿ ವಾಣಿಜ್ಯ ಸಿಲಿಂಡರ್ಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಹೋಟೆಲ್ಗಳಿಗೆ ಆದ್ಯತೆ ನೀಡುವ ಮೂಲಕ ದಿನಕ್ಕೆ 29,463 ಸಿಲಿಂಡರ್ಗಳನ್ನು ಹಂಚಿಕೆ ಮಾಡುವ ಯೋಜನೆ ಜಾರಿಗೆ ತಂದಿರುವುದಾಗಿ ತಿಳಿಸಿದ್ದಾರೆ.
ಇದಲ್ಲದೆ, ಸಿಲಿಂಡರ್ಗಳ ಅಕ್ರಮ ಸಂಗ್ರಹಣೆ ಹಾಗೂ ಹೆಚ್ಚುವರಿ ದರಕ್ಕೆ ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಈಗಾಗಲೇ 1,169 ಪ್ರಕರಣಗಳು ದಾಖಲಾಗಿದ್ದು, 1,603 ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.