ಗ್ರಾಮೀಣ ಭಾರತದಲ್ಲಿ ಹಾವು ಕಡಿತದ ಪ್ರಕರಣಗಳಿಂದ ಅನೇಕ ಜೀವಗಳು ಕಳೆದುಹೋಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ವಿಜ್ಞಾನಿಗಳು ರೈತರ ಸುರಕ್ಷತೆಗೆ ಹೊಸ ತಂತ್ರಜ್ಞಾನಾಧಾರಿತ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.
‘ಕಿಸಾನ್ ಮಿತ್ರ ಸ್ಟಿಕ್’ ಎಂಬ ಈ ಎಲೆಕ್ಟ್ರಾನಿಕ್ ಸ್ಮಾರ್ಟ್ ಸಾಧನ, ರೈತರಿಗೆ ಹಾವುಗಳ ಉಪಸ್ಥಿತಿಯನ್ನು ಮುಂಚಿತವಾಗಿ ಎಚ್ಚರಿಸುವ ಸಾಧನವಾಗಿ ರೂಪಿಸಲಾಗಿದೆ. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ನೀರಾವರಿ ಕೆಲಸ, ಹೊಲದ ಪರಿಶೀಲನೆ ಅಥವಾ ಕಡಿಮೆ ಬೆಳಕಿನ ಪ್ರದೇಶಗಳಲ್ಲಿ ಕೆಲಸ ಮಾಡುವ ರೈತರಿಗೆ ಇದು ಬಹಳ ಉಪಯುಕ್ತವಾಗಲಿದೆ.
ಗ್ರಾಮೀಣ ಪ್ರದೇಶಗಳಲ್ಲಿ ರೈತರು ಹೊಲಗಳಲ್ಲಿ ಕೆಲಸ ಮಾಡುವಾಗ ಹಾವುಗಳ ಅಪಾಯವನ್ನು ಎದುರಿಸುವುದು ಸಾಮಾನ್ಯ. ಬೆಳಕು ಕಡಿಮೆ ಇರುವ ಸಂದರ್ಭಗಳಲ್ಲಿ ಹಾವುಗಳನ್ನು ಗಮನಿಸಲು ಸಾಧ್ಯವಾಗದೇ ಅನಾಹುತಗಳು ಸಂಭವಿಸುತ್ತವೆ.
ಈ ಸಮಸ್ಯೆಗೆ ಪರಿಹಾರವಾಗಿ ‘ಕಿಸಾನ್ ಮಿತ್ರ ಸ್ಟಿಕ್’ ಅಭಿವೃದ್ಧಿಪಡಿಸಲಾಗಿದೆ. ಸಾಧನವು ಸುಮಾರು 5 ರಿಂದ 15 ಮೀಟರ್ ವ್ಯಾಪ್ತಿಯೊಳಗಿನ ಹಾವು ಅಥವಾ ಇತರೆ ಸರಿಸೃಪಗಳ ಚಲನವಲನವನ್ನು ಗುರುತಿಸಬಲ್ಲದು. ಜೊತೆಗೆ 100 ಮೀಟರ್ ದೂರದವರೆಗೆ ಎಚ್ಚರಿಕೆ ಸಂದೇಶ ಪ್ರಸಾರ ಮಾಡುವ ಸಾಮರ್ಥ್ಯವೂ ಇದಕ್ಕಿದೆ.
ಈ ಕಂಬಿಯನ್ನು ನೆಲದ ಮೇಲೆ ಇಟ್ಟು ಬಟನ್ ಒತ್ತಿ ಚಾಲನೆ ಮಾಡಿದರೆ, ಸುತ್ತಮುತ್ತಲಿನ ಪ್ರದೇಶವನ್ನು ಸ್ಕ್ಯಾನ್ ಮಾಡುತ್ತದೆ. ಹಾವು ಇರುವ ಲಕ್ಷಣ ಕಂಡುಬಂದರೆ ಜೋರಾದ ಕಂಪನದ ಮೂಲಕ ರೈತನಿಗೆ ಎಚ್ಚರಿಕೆ ನೀಡುತ್ತದೆ. ಇದರಿಂದ ರೈತರು ತಕ್ಷಣವೇ ಹಿಂತಿರುಗಿ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಪ್ರಸ್ತುತಿಯಲ್ಲಿ ಈ ಸಾಧನದ ಮಾಹಿತಿ ನೀಡಲಾಗಿದೆ.
ಈ ಸ್ಮಾರ್ಟ್ ಸಾಧನದಲ್ಲಿ Passive Infrared (PIR) ಮತ್ತು Ultrasonic Sensors ಬಳಕೆ ಮಾಡಲಾಗಿದೆ. ಹಾವುಗಳ ಉಷ್ಣತೆ, ಚಲನೆಯ ವೈಶಿಷ್ಟ್ಯ ಅಥವಾ ಕಂಪನ ಆವರ್ತನಗಳನ್ನು ಗುರುತಿಸಿ ಅಪಾಯದ ಸೂಚನೆ ನೀಡುತ್ತದೆ. ಇನ್ನಷ್ಟು ಅಭಿವೃದ್ಧಿಪಡಿಸಿದ ಮಾದರಿಗಳಲ್ಲಿ ಕೃತಕ ಬುದ್ಧಿಮತ್ತೆ (AI) ಬಳಸಿ ಹಾವುಗಳ ಚಲನವಲನ ಮತ್ತು ಸಾಮಾನ್ಯ ಪರಿಸರ ಚಲನೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ಸಾಮರ್ಥ್ಯವೂ ಇದೆ. ಇದರಿಂದ ತಪ್ಪು ಎಚ್ಚರಿಕೆಗಳ ಪ್ರಮಾಣ ಕಡಿಮೆಯಾಗುತ್ತದೆ.
ಈ ಸಾಧನಗಳನ್ನು Arduino ಅಥವಾ Raspberry Pi ಮಾದರಿಯ ಮೈಕ್ರೋ ಕಂಟ್ರೋಲರ್ಗಳ ಮೂಲಕ ಕಾರ್ಯಗತಗೊಳಿಸಲಾಗಿದೆ. ಸಂವೇದಕಗಳು ಹಾವುಗಳ ಶಬ್ದ, ನೆಲದ ಮೇಲಿನ ವಿಶೇಷ ಚಲನೆ ಅಥವಾ ಕಂಪನವನ್ನು ಗುರುತಿಸಿದ ಕೂಡಲೇ ಬಜರ್ ಅಥವಾ ಕಂಪನದ ಮೂಲಕ ಎಚ್ಚರಿಕೆ ನೀಡುತ್ತವೆ. ಕೆಲ ಮಾದರಿಗಳು ಮೊಬೈಲ್ಗೆ ನೇರ ಸಂದೇಶ ಕಳುಹಿಸುವ ವ್ಯವಸ್ಥೆಯನ್ನೂ ಹೊಂದಿವೆ.
‘ಕಿಸಾನ್ ಮಿತ್ರ ಸ್ಟಿಕ್’ ಕೇವಲ ರೈತರ ಸುರಕ್ಷತೆಗೆ ಮಾತ್ರವಲ್ಲ, ಪರಿಸರ ಸಂರಕ್ಷಣೆಯಲ್ಲಿಯೂ ಸಹಕಾರಿ. ಹಾವುಗಳನ್ನು ಕೊಲ್ಲದೆ ಸುರಕ್ಷಿತವಾಗಿ ಗುರುತಿಸಲು ಅಥವಾ ಹಿಡಿಯಲು ಈ ತಂತ್ರಜ್ಞಾನ ನೆರವಾಗುತ್ತದೆ. ಹಾವುಗಳು ಕೃಷಿಭೂಮಿಯಲ್ಲಿ ಇಲಿ ಸಂಖ್ಯೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ರೈತರ ಜೀವ ಉಳಿಸುವ ಜೊತೆಗೆ ಜೈವ ವೈವಿಧ್ಯ ಸಂರಕ್ಷಿಸುವ ದ್ವಿಪಾತ್ರವನ್ನು ಈ ಸಾಧನ ನಿರ್ವಹಿಸಲಿದೆ.
ಒಟ್ಟಿನಲ್ಲಿ, ಕೃಷಿ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವ ಈ ಕಾಲದಲ್ಲಿ ‘ಕಿಸಾನ್ ಮಿತ್ರ ಸ್ಟಿಕ್’ ರೈತರ ಜೀವ ರಕ್ಷಕ ಸಾಧನವಾಗಿ ಹೊರಹೊಮ್ಮುತ್ತಿದೆ.