Thursday, July 23, 2026
Join WhatsApp Group
HomeAgricultureಕೃಷಿ ಹೊಂಡ; ಸರ್ಕಾರವೇ ಭರಿಸಲಿದೆ ಶೇ.90 ವೆಚ್ಚ!

ಕೃಷಿ ಹೊಂಡ; ಸರ್ಕಾರವೇ ಭರಿಸಲಿದೆ ಶೇ.90 ವೆಚ್ಚ!

ಕಾರವಾರ: ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಸುರಿಯದಿರುವ ಆತಂಕದ ನಡುವೆ ರೈತರಿಗೆ ಸರ್ಕಾರದಿಂದ ಮಹತ್ವದ ಅವಕಾಶವೊಂದು ಲಭ್ಯವಾಗಿದೆ. ಮಳೆ ನೀರನ್ನು ಸಂಗ್ರಹಿಸಿ ಬೆಳೆಗಳಿಗೆ ಅಗತ್ಯ ಸಮಯದಲ್ಲಿ ಬಳಸುವ ಉದ್ದೇಶದಿಂದ ಜಾರಿಯಲ್ಲಿರುವ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಶೇ.90ರಷ್ಟು ಸಹಾಯಧನ ನೀಡಲು ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮಳೆ ಆಧಾರಿತ ಕೃಷಿಯೇ ಹೆಚ್ಚಿರುವ ಉತ್ತರ ಕನ್ನಡ ಜಿಲ್ಲೆಯಂತಹ ಪ್ರದೇಶಗಳಲ್ಲಿ ಮಳೆ ಕೊರತೆ ಉಂಟಾದಾಗ ಬೆಳೆ ಉಳಿಸಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗುತ್ತದೆ. ಇಂತಹ ಸಂದರ್ಭದಲ್ಲಿ ಕೃಷಿ ಹೊಂಡ ನಿರ್ಮಾಣ, ನೀರು ಸಂಗ್ರಹಣೆ ಮತ್ತು ಸೂಕ್ಷ್ಮ ನೀರಾವರಿ ವ್ಯವಸ್ಥೆಗಳು ರೈತರಿಗೆ ವರದಾನವಾಗಲಿವೆ.

ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ, ಹೊಂಡದ ಸುತ್ತ ತಂತಿ ಬೇಲಿ, ಹೊಂಡದಿಂದ ನೀರು ಎತ್ತಲು 10 ಎಚ್‌ಪಿ ಸಾಮರ್ಥ್ಯದ ಡೀಸೆಲ್ ಅಥವಾ ಸೋಲಾರ್ ಪಂಪ್‌ಸೆಟ್ ಹಾಗೂ ಬೆಳೆಗಳಿಗೆ ನೀರುಣಿಸಲು ಸೂಕ್ಷ್ಮ ನೀರಾವರಿ ಘಟಕಗಳ ಸೌಲಭ್ಯಗಳನ್ನು ಶೇ.90ರ ಸಹಾಯಧನದಲ್ಲಿ ಒದಗಿಸಲಾಗುತ್ತದೆ.

ಆದರೆ ಈ ಯೋಜನೆಯ ಲಾಭ ಪಡೆಯಲು ಕೆಲವು ಷರತ್ತುಗಳಿವೆ. ರೈತರು ಒಂದೇ ಸರ್ವೇ ನಂಬರಿನಲ್ಲಿ ಕನಿಷ್ಠ ಒಂದು ಎಕರೆ ಸಾಗುವಳಿ ಭೂಮಿ ಹೊಂದಿರಬೇಕು. ಹಿಂದಿನ ವರ್ಷಗಳಲ್ಲಿ ಕೃಷಿ ಭಾಗ್ಯ ಯೋಜನೆ ಅಥವಾ ಇತರ ಯಾವುದೇ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿಕೊಂಡಿರುವ ರೈತರು ಈ ಯೋಜನೆಗೆ ಅರ್ಹರಾಗುವುದಿಲ್ಲ. ಈ ಅರ್ಹತೆಯನ್ನು ಕೆ-ಕಿಸಾನ್ ಪೋರ್ಟಲ್‌ನಲ್ಲಿ ಸ್ಥಳ ಪರಿಶೀಲನೆ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತದೆ.

ಯೋಜನೆಯ ಪ್ರಯೋಜನ ಪಡೆಯಲು ಆಸಕ್ತ ರೈತರು ಪಹಣಿ (RTC), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್‌ನ ಪ್ರತಿ ಹಾಗೂ ಎರಡು ಭಾವಚಿತ್ರಗಳೊಂದಿಗೆ ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವರ್ಷ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ವಾಡಿಕೆಗಿಂತ ಶೇ.25ರಷ್ಟು ಮಳೆ ಕೊರತೆ ದಾಖಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆ ನೀರನ್ನು ಸಂಗ್ರಹಿಸಿ ಅಗತ್ಯ ಸಂದರ್ಭದಲ್ಲಿ ಬಳಸಲು ಕೃಷಿ ಹೊಂಡ ಮತ್ತು ಸೂಕ್ಷ್ಮ ನೀರಾವರಿ ವ್ಯವಸ್ಥೆಗಳು ರೈತರಿಗೆ ದೀರ್ಘಕಾಲದ ನೆರವಾಗುವ ಸಾಧ್ಯತೆ ಇದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share