ಉತ್ತರ ಪ್ರದೇಶದ Meerut ನಲ್ಲಿ ಸುಮಾರು 10 ಸಾವಿರದಷ್ಟು ದಲಿತರು ಜನಿವಾರ ಧರಿಸುವ ಮೂಲಕ ಬ್ರಾಹ್ಮಣ್ಯವನ್ನು ಸ್ವೀಕರಿಸಿರುವ ಘಟನೆ ಗಮನ ಸೆಳೆಯುತ್ತಿದೆ.
ಸಾಮಾಜಿಕ ತಾರತಮ್ಯ ಮತ್ತು ವಿಭಜಕ ರಾಜಕೀಯದ ವಿರುದ್ಧವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಭಾಗವಹಿಸಿದವರು ತಿಳಿಸಿದ್ದಾರೆ.ಜನಿವಾರವು ವೇದಗಳು, ತ್ರಿಗುಣಗಳು ಹಾಗೂ ತ್ರಿಮೂರ್ತಿಗಳನ್ನು ಪ್ರತಿನಿಧಿಸುವ ಸಂಕೇತವಾಗಿದ್ದು, ಸಂಪ್ರದಾಯಬದ್ಧವಾಗಿ ಧರಿಸಿದರೆ ಬ್ರಾಹ್ಮಣ್ಯವನ್ನು ಸ್ವೀಕರಿಸಿದಂತಾಗುತ್ತದೆ ಎಂಬ ನಂಬಿಕೆ ಇದೆ.
ಈ ಹಿನ್ನೆಲೆ ವಿಶೇಷ ವಿಧಿ-ವಿಧಾನಗಳ ಮೂಲಕ ಸಾವಿರಾರು ಮಂದಿ ಈ ಆಚರಣೆಯಲ್ಲಿ ಭಾಗವಹಿಸಿ, ಬ್ರಾಹ್ಮಣ ಸಮುದಾಯಕ್ಕೆ ಸೇರ್ಪಡೆಯಾಗಿರುವುದಾಗಿ ಹೇಳಲಾಗಿದೆ.ಈ ನಿರ್ಧಾರದ ಬಗ್ಗೆ ಮಾತನಾಡಿದ ಕೆಲವರು, “ಬ್ರಾಹ್ಮಣ ಸಮುದಾಯದ ಆಚಾರ-ವಿಚಾರಗಳು ಹಾಗೂ ಸಂಪ್ರದಾಯಗಳು ನಮಗೆ ಆಕರ್ಷಕವಾಗಿವೆ. ಅದರಿಂದಲೇ ಈ ಹೆಜ್ಜೆ ಇಟ್ಟಿದ್ದೇವೆ” ಎಂದು ತಿಳಿಸಿದ್ದಾರೆ.
ಮತ್ತಷ್ಟು ಮಂದಿ, “ಸಮಾಜದಲ್ಲಿ ಇರುವ ಭೇದಭಾವದಿಂದ ಬೇಸತ್ತು, ಎಲ್ಲರೂ ಸಮಾನರು ಎಂಬ ಸಂದೇಶ ನೀಡಲು ಈ ಕ್ರಮ ಕೈಗೊಂಡಿದ್ದೇವೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಕೆಲವರು, “ನಾವು ಜಾತಿ-ಭೇದ ಮರೆತು ಒಗ್ಗಟ್ಟಾಗಿ ಇರಲು ಪ್ರಯತ್ನಿಸಿದರೂ, ಕೆಲವರು ನಮ್ಮ ನಡುವೆ ಭೇದವನ್ನು ಸೃಷ್ಟಿಸುತ್ತಾರೆ. ರಾಜಕೀಯ ಲಾಭಕ್ಕಾಗಿ ಕೆಲವರು ಇದನ್ನು ಬಳಸಿಕೊಳ್ಳುತ್ತಾರೆ. ನಮ್ಮ ಈ ನಿರ್ಧಾರದಿಂದ ಅವರ ನಡೆ ಹೇಗಿರುತ್ತದೆ ನೋಡೋಣ” ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಘಟನೆ ಸಾಮಾಜಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಸಮಾನತೆ ಮತ್ತು ಗುರುತಿನ ಪ್ರಶ್ನೆಗಳ ಕುರಿತು ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.