ಮುಂಡಗೋಡ: ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚನೆ ನಡೆಸಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತಗೌಡ ಪಾಟೀಲ್, ಗಂಗಾ ಕಲ್ಯಾಣ ಯೋಜನೆ, ವಿಧವಾ ವಸತಿ ಗೃಹ, ಆಶ್ರಯ ಯೋಜನೆ, ಅಂಗವಿಕಲ ವಿವಾಹ ಪ್ರೋತ್ಸಾಹಧನ ಹಾಗೂ ಅಲ್ಪಸಂಖ್ಯಾತರ ಯೋಜನೆಗಳಡಿ ಸೌಲಭ್ಯ ನೀಡುವುದಾಗಿ ಭರವಸೆ ನೀಡಿ ಜನರಿಂದ ಹಣ ವಸೂಲಿ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಫಿರ್ಯಾದಿದಾರ ಫಕ್ಕಿರೇಶ ಜಾಧವ ಅವರಿಂದ ಹಂತ ಹಂತವಾಗಿ 1.50 ಲಕ್ಷ ರೂ ಪಡೆದುಕೊಂಡಿರುವುದಲ್ಲದೆ, ಇತರರಿಂದಲೂ ಹಣ ವಸೂಲಿ ಮಾಡಲಾಗಿದೆ. ಚನ್ನಬಸವ್ವ, ಪತ್ತೆಸಾಬ್ ಬೆಲವಂತರ, ಚಂದ್ರಕಲಾ ಬಾಗಾಯಿ, ಇಮ್ತಿಯಾಜ್ ಅಹಮ್ಮದ್, ರಮೇಶ್ ಹಡಪದ, ಪಕ್ಕಿರೇಶ ಹಾಗೂ ಬಸವರಾಜ ಹರಿಜನ ಸೇರಿದಂತೆ ಹಲವರಿಂದ ಒಟ್ಟು ಸುಮಾರು 3.94 ಲಕ್ಷ ರೂ ಪಡೆದುಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಹಣ ಪಡೆದುಕೊಂಡಿದ್ದರೂ ಯಾವುದೇ ಯೋಜನೆಯ ಸೌಲಭ್ಯ ಒದಗಿಸದೆ, ಹಣವನ್ನೂ ಹಿಂದಿರುಗಿಸದೇ ವಂಚನೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.