Saturday, May 30, 2026
HomeAgricultureಬಿಸಿಲಿಗೆ ಕಮರಿದ ಅಡಿಕೆ ತೋಟ: ಟ್ಯಾಂಕರ್ ನೀರಿನ ಮೊರೆ ಹೋದ ದಾವಣಗೆರೆ ರೈತರು

ಬಿಸಿಲಿಗೆ ಕಮರಿದ ಅಡಿಕೆ ತೋಟ: ಟ್ಯಾಂಕರ್ ನೀರಿನ ಮೊರೆ ಹೋದ ದಾವಣಗೆರೆ ರೈತರು

ದಾವಣಗೆರೆ: ಜಿಲ್ಲೆಯಲ್ಲಿ ತೀವ್ರ ಬೇಸಿಗೆ ಮತ್ತು ಕುಸಿಯುತ್ತಿರುವ ಅಂತರ್ಜಲ ಮಟ್ಟ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ನೆತ್ತಿ ಸುಡುವ ಬಿಸಿಲಿನಿಂದ ಅಡಿಕೆ ತೋಟಗಳು ಒಣಗಲಾರಂಭಿಸಿದ್ದು, ರೈತರು ಈಗ ಟ್ಯಾಂಕರ್ ನೀರಿನ ಮೂಲಕ ತೋಟ ಉಳಿಸಿಕೊಳ್ಳುವ ಹೋರಾಟ ನಡೆಸುತ್ತಿದ್ದಾರೆ.

ದಾವಣಗೆರೆ ತಾಲೂಕಿನ ಕಂದನಕೋವಿ, ಅಗಸನಕಟ್ಟೆ, ರುದ್ರನಕಟ್ಟೆ, ಐಗೂರು, ಗುಡಾಳ್ ಸೇರಿದಂತೆ ಹಲವೆಡೆ ಅಡಿಕೆ ತೋಟಗಳು ನೀರಿಲ್ಲದೆ ಕಮರತೊಡಗಿವೆ. ಇದರಿಂದ ರೈತರು ದಿನನಿತ್ಯ ಸಾವಿರಾರು ರೂಪಾಯಿ ವೆಚ್ಚ ಮಾಡಿ ಖಾಸಗಿ ಬೋರ್‌ವೆಲ್‌ಗಳಿಂದ ಟ್ಯಾಂಕರ್ ಮೂಲಕ ನೀರು ತರಿಸುತ್ತಿದ್ದಾರೆ.

ಒಂದು ಟ್ಯಾಂಕರ್ ನೀರಿಗೆ ಸುಮಾರು 250 ರೂ ಪಾವತಿಸಬೇಕಾಗುತ್ತಿದ್ದು, ಒಬ್ಬ ರೈತನಿಗೆ ದಿನಕ್ಕೆ 10ರಿಂದ 15 ಟ್ಯಾಂಕರ್ ನೀರಿನ ಅವಶ್ಯಕತೆ ಎದುರಾಗಿದೆ. ಕೆಲವರು ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹಿಸಿ ಅಲ್ಲಿಂದ ತೋಟಗಳಿಗೆ ನೀರು ಹರಿಸುತ್ತಿದ್ದಾರೆ.

ಕೆಲ ರೈತರು ದಿನಕ್ಕೆ 10-12 ಟ್ಯಾಂಕರ್ ನೀರು ತರುತ್ತಿದ್ದಾರೆ. ಇದಕ್ಕೆ ಐದಾರು ಸಾವಿರ ರೂಪಾಯಿ ಖರ್ಚಾಗುತ್ತಿದೆ. ಸ್ವಂತ ಟ್ರ್ಯಾಕ್ಟರ್ ಹೊಂದಿದವರಿಗೆ ಸ್ವಲ್ಪ ವೆಚ್ಚ ಕಡಿಮೆ. ಇಲ್ಲದಿದ್ದರೆ ದಿನಕ್ಕೆ 15-20 ಸಾವಿರ ಖರ್ಚಾಗುತ್ತಿತ್ತು.800 ಅಡಿ ಬೋರ್ ಕೊರೆಸಿದರೂ ನೀರು ಸಿಗುತ್ತಿಲ್ಲ. ನಾಲ್ಕು ಎಕರೆ ಅಡಿಕೆ ತೋಟ ಉಳಿಸಿಕೊಳ್ಳಲು ಕೆಲ ರೈತರು ಪ್ರತಿದಿನ 12 ಟ್ಯಾಂಕರ್ ನೀರು ತರಿಸುತ್ತಿದ್ದು, ನೀರಿನ ಚಿಂತೆಯಿಂದ ರಾತ್ರಿ ನಿದ್ದೆ ಬಾರದ ಪರಿಸ್ಥಿತಿ ಇಲ್ಲಿನ ಅಡಿಕೆ ಬೆಳೆಗಾರದದ್ದು.

ರೈತರು ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. 22 ಕೆರೆ ತುಂಬಿಸುವ ಯೋಜನೆ ಸಮರ್ಪಕವಾಗಿ ಜಾರಿಯಾಗಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಕೋಟ್ಯಂತರ ರೂಪಾಯಿ ಖರ್ಚಾದರೂ ಕೆರೆಗಳಿಗೆ ನೀರು ಬಂದಿಲ್ಲ ಎಂದು ಆರೋಪಿಸಿದ್ದಾರೆ.

ಚನ್ನಗಿರಿ, ಮಾಯಕೊಂಡ ಹಾಗೂ ಜಗಳೂರು ಭಾಗಗಳಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಳೆ ಕೈಕೊಟ್ಟರೆ ಅಡಿಕೆ ಬೆಳೆಗಾರರ ಸ್ಥಿತಿ ಇನ್ನಷ್ಟು ಗಂಭೀರವಾಗುವ ಆತಂಕ ವ್ಯಕ್ತವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share