ಮೈಸೂರು :ಪಿರಿಯಾಪಟ್ಟಣದ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರ ಆಶೀರ್ವಾದದಿಂದಲೇ ನಾನು ಇಂದು ಜೀವಂತವಾಗಿದ್ದೇನೆ. ಜನರ ಪ್ರೀತಿ-ವಿಶ್ವಾಸ ಉಳಿಸಿಕೊಳ್ಳುವುದೇ ನನ್ನ ರಾಜಕೀಯ ಜೀವನದ ದೊಡ್ಡ ಸಂಪತ್ತು ಎಂದು ಮಾಜಿ ಶಾಸಕ ಕೆ.ಮಹದೇವ್ ಹೇಳಿದರು .
ಪಟ್ಟಣದಲ್ಲಿ ಅಭಿಮಾನಿಗಳು ಹಾಗೂ ಹಿತೈಷಿಗಳು ಆಯೋಜಿಸಿದ್ದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಜನಪರ ಕೆಲಸಗಳೇ ರಾಜಕಾರಣಿಯ ನಿಜವಾದ ಗುರುತು ಎಂದು ಹೇಳಿದರು.“ಮಾನವನು ಹುಟ್ಟುವಾಗ ಏನನ್ನೂ ತಂದುಕೊಳ್ಳುವುದಿಲ್ಲ. ಆದರೆ ಬದುಕಿರುವಾಗ ಸಮಾಜಕ್ಕೆ ಎಷ್ಟು ಒಳ್ಳೆಯದು ಮಾಡಿದ್ದೇವೆ ಎಂಬುದೇ ಮುಖ್ಯ. ನಾನು ಶಾಸಕನಾಗಿದ್ದ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗಾಗಿ ನಿಸ್ವಾರ್ಥವಾಗಿ ದುಡಿದಿದ್ದೇನೆ” ಎಂದು ಹೇಳಿದರು.
ರಾಜಕೀಯ ವಿರೋಧಿಗಳ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ ಅವರು, “ಕೆಲವರು ನನ್ನ ತೇಜೋವಧೆ ಮಾಡುವುದನ್ನೇ ರಾಜಕೀಯ ಮಾಡಿಕೊಂಡಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂಬ ಅರಿವು ಇರಬೇಕು. ಜನರ ವಿಶ್ವಾಸ ಗಳಿಸುವುದು ಕಷ್ಟ, ಆದರೆ ಟೀಕೆ ಮಾಡುವುದು ಸುಲಭ” ಎಂದು ಕಿಡಿಕಾರಿದರು.ತಮ್ಮ ಆಡಳಿತಾವಧಿಯ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿದ ಅವರು, “ಕೊರೋನಾ ಸಂಕಷ್ಟದ ನಡುವೆಯೂ ಸುಮಾರು 270 ಕೋಟಿ ರೂ. ವೆಚ್ಚದ ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತಂದಿದ್ದೇನೆ,ಪಾಲಿಟೆಕ್ನಿಕ್ ಕಾಲೇಜು ಹಾಗೂ ಐಟಿಐ ಕಾಲೇಜುಗಳ ಸ್ಥಾಪನೆ ನನ್ನ ಅವಧಿಯ ಮಹತ್ವದ ಸಾಧನೆಗಳಾಗಿವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಮಾತನಾಡಿ, “ಕೆ.ಮಹದೇವ್ ಅವರು ಜನಮನ ಗೆದ್ದ ನಾಯಕರು. ತಾಲೂಕಿನ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಅವರ ಸೇವಾ ಕಾರ್ಯಗಳೇ ಅವರಿಗೆ ಮತ್ತೊಮ್ಮೆ ಜನಾಶೀರ್ವಾದ ತಂದುಕೊಡಲಿವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರು, ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿ ಮಾಜಿ ಶಾಸಕರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಅನ್ನದಾನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ಕಾರ್ಯಕ್ರಮವು ಹಬ್ಬದ ವಾತಾವರಣವನ್ನು ಸೃಷ್ಟಿಸಿತು.