ಗೃಹಲಕ್ಷ್ಮಿ ಇ-ಕೆವೈಸಿ ಕಡ್ಡಾಯವಲ್ಲ; ಸತೀಶ್ ನಾಯ್ಕ
ಕಾರವಾರ: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ (e-KYC) ಮಾಡಿಸಬೇಕು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ವದಂತಿಯಷ್ಟೇ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ಪಿ. ನಾಯ್ಕ ಸ್ಪಷ್ಟಪಡಿಸಿದ್ದಾರೆ.
ಸರ್ಕಾರದಿಂದ ಈವರೆಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಇ-ಕೆವೈಸಿ ಕಡ್ಡಾಯಗೊಳಿಸುವ ಯಾವುದೇ ಅಧಿಕೃತ ಆದೇಶ ಅಥವಾ ಮಾರ್ಗಸೂಚಿ ಹೊರಬಂದಿಲ್ಲ. ಆದ್ದರಿಂದ ಈಗಾಗಲೇ ಯಾವುದೇ ತೊಂದರೆಯಿಲ್ಲದೆ ಗೃಹಲಕ್ಷ್ಮಿ ಹಣ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿರುವ ಫಲಾನುಭವಿಗಳು ಸೈಬರ್ ಸೆಂಟರ್, ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ತೆರಳಿ ಅನಗತ್ಯವಾಗಿ ನೋಂದಣಿ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 3,12,818 ಅರ್ಹ ಫಲಾನುಭವಿಗಳ ಗುರಿ ನಿಗದಿಯಾಗಿದ್ದು, ಈಗಾಗಲೇ ನೋಂದಾಯಿತ ಫಲಾನುಭವಿಗಳಿಗೆ 2026ರ ಏಪ್ರಿಲ್ ತಿಂಗಳವರೆಗೆ ಡಿಬಿಟಿ (DBT) ಮೂಲಕ ಹಣ ಯಶಸ್ವಿಯಾಗಿ ಜಮೆಯಾಗಿದೆ.
ಇತ್ತೀಚೆಗೆ ಯೂಟ್ಯೂಬ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯನ್ನು ನಂಬಿ ಅನೇಕ ಮಹಿಳೆಯರು ಖಾಸಗಿ ಸೈಬರ್ ಕೇಂದ್ರಗಳು, ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳಲು ಮುಗಿಬೀಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಹೀಗಾಗಿ, ಗೃಹಲಕ್ಷ್ಮಿ ಹಣ ನಿಯಮಿತವಾಗಿ ಖಾತೆಗೆ ಬರುತ್ತಿರುವ ಫಲಾನುಭವಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೇ, ಅನಗತ್ಯವಾಗಿ ಹಣ ಅಥವಾ ಸಮಯ ವ್ಯಯ ಮಾಡಿ ಇ-ಕೆವೈಸಿ ಮಾಡಿಸಿಕೊಳ್ಳುವ ಗೋಜಿಗೆ ಹೋಗಬಾರದು ಎಂದು ಸತೀಶ್ ಪಿ. ನಾಯ್ಕ ಮನವಿ ಮಾಡಿದ್ದಾರೆ.