ಪ್ರತಿ ದಿನವೂ ಸೂರ್ಯ ಉದಯಿಸುತ್ತಲೇ ಇರುತ್ತಾನೆ. ಆದರೆ, ಪ್ರತಿಯೊಬ್ಬರ ಜೀವನದಲ್ಲಿ ಬೆಳಕು ಮೂಡುವುದು ಸೂರ್ಯನಿಂದಲ್ಲ. ಮನಸ್ಸಿನೊಳಗೆ ಮೂಡುವ ಹೊಸ ನಿರ್ಧಾರದಿಂದ! ಬದುಕಿನಲ್ಲಿ ಅನೇಕರು ದೊಡ್ಡ ಅವಕಾಶಗಳಿಗಾಗಿ ಕಾಯುತ್ತಲೇ ಇರುತ್ತಾರೆ. “ಒಂದು ದಿನ ಎಲ್ಲವೂ ಸರಿಯಾಗುತ್ತದೆ” ಎಂದು ಭಾವಿಸುತ್ತಾರೆ. ಆದರೆ, ಬದುಕು ಬದಲಾಗುವುದು ಯಾವುದೋ ಅದ್ಭುತದಿಂದಲ್ಲ, ನಾವು ತೆಗೆದುಕೊಳ್ಳುವ ಸಣ್ಣ ಸಣ್ಣ ನಿರ್ಧಾರಗಳಿಂದ.
ಒಬ್ಬ ರೈತನು ಪ್ರತಿದಿನ ಗಿಡಕ್ಕೆ ನೀರು ಹಾಕುತ್ತಾನೆ. ಮೊದಲ ದಿನವೇ ಫಲ ಸಿಗುವುದಿಲ್ಲ. ಎರಡನೇ ದಿನವೂ ಏನೂ ಬದಲಾವಣೆ ಕಾಣುವುದಿಲ್ಲ. ಆದರೆ ಅವನು ಕೈಬಿಡುವುದಿಲ್ಲ. ತಿಂಗಳುಗಳ ನಂತರ ಅದೇ ಗಿಡ ನೆರಳು ನೀಡುವ ಮರವಾಗುತ್ತದೆ. ಜೀವನವೂ ಹೀಗೆಯೇ. ನಮ್ಮ ಪ್ರಯತ್ನಗಳು ಕೆಲವೊಮ್ಮೆ ತಕ್ಷಣ ಫಲ ಕೊಡದೇ ಇರಬಹುದು. ಆದರೆ ನಿರಂತರತೆಯೇ ಯಶಸ್ಸಿನ ನಿಜವಾದ ರಹಸ್ಯ.
ಇಂದಿನ ಜಗತ್ತು ತುಂಬಾ ವೇಗವಾಗಿ ಓಡುತ್ತಿದೆ. ಇನ್ನೊಬ್ಬರ ಸಾಧನೆ ನೋಡಿಕೊಂಡು ಹಲವರು ತಮ್ಮ ಬದುಕನ್ನೇ ಅಳೆಯಲು ಶುರುಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿನ ನಗುಮುಖಗಳ ಹಿಂದೆ ಎಷ್ಟು ಹೋರಾಟಗಳಿವೆ ಎಂಬುದು ನಮಗೆ ಗೊತ್ತಿರುವುದಿಲ್ಲ. ನಮ್ಮ ಬದುಕನ್ನು ಮತ್ತೊಬ್ಬರ ಬದುಕಿನ ಜೊತೆ ಹೋಲಿಕೆ ಮಾಡಿಕೊಳ್ಳುವುದಕ್ಕಿಂತ, ನಿನ್ನೆಗಿಂತ ಇಂದು ನಾವು ಎಷ್ಟು ಉತ್ತಮರಾಗಿದ್ದೇವೆ ಎಂಬುದನ್ನು ನೋಡುವುದು ಮುಖ್ಯ.
ಕೆಲವರು ಅವಕಾಶ ಸಿಗಲಿಲ್ಲ ಎಂದು ಬೇಸರಪಡುತ್ತಾರೆ. ಆದರೆ ಅವಕಾಶಗಳು ತಾವಾಗೇ ಬಂದು ಬಾಗಿಲು ತಟ್ಟುವುದಿಲ್ಲ. ನಾವೇ ಹುಡುಕಿಕೊಂಡು ಹೋಗಬೇಕು. ಸಣ್ಣ ಕೆಲಸವನ್ನೂ ಪ್ರಾಮಾಣಿಕವಾಗಿ ಮಾಡುವವರನ್ನು ಬದುಕು ಒಂದು ದಿನ ದೊಡ್ಡ ಜಾಗಕ್ಕೆ ಕೊಂಡೊಯ್ಯುತ್ತದೆ. ತಕ್ಷಣ ಗೆಲುವು ಸಿಗದಿದ್ದರೂ ಪ್ರಯತ್ನ ನಿಲ್ಲಬಾರದು. ಯಾಕೆಂದರೆ, ಸೋಲು ಎನ್ನುವುದು ಅಂತಿಮ ತೀರ್ಪಲ್ಲ, ಅದು ಇನ್ನಷ್ಟು ಕಲಿಯುವ ಅವಕಾಶ.
ಹಲವರು “ಸಮಯ ಇಲ್ಲ” ಎನ್ನುತ್ತಾರೆ. ಆದರೆ ನಿಜವಾಗಿ ಸಮಯ ಎಲ್ಲರಿಗೂ ಒಂದೇ. ವ್ಯತ್ಯಾಸ ಇರುವುದೇ ಅದರ ಬಳಕೆಯಲ್ಲಿ. ಬೆಳಗ್ಗೆ ಎದ್ದ ಕ್ಷಣದಿಂದಲೇ ನಕಾರಾತ್ಮಕ ವಿಚಾರಗಳನ್ನು ಮನಸ್ಸಿಗೆ ತುಂಬಿಕೊಂಡರೆ ದಿನವೇ ಭಾರವಾಗುತ್ತದೆ. ಅದೇ ಒಂದು ಒಳ್ಳೆಯ ಆಲೋಚನೆಯಿಂದ ದಿನ ಆರಂಭಿಸಿದರೆ ಬದುಕಿನ ಮೇಲಿನ ದೃಷ್ಟಿಕೋನವೂ ಬದಲಾಗುತ್ತದೆ.
ಜೀವನದಲ್ಲಿ ಎಲ್ಲವೂ ನಮ್ಮ ಇಷ್ಟದಂತೆ ನಡೆಯುವುದಿಲ್ಲ. ಕೆಲವೊಮ್ಮೆ ನಾವು ತುಂಬಾ ಪ್ರೀತಿಸಿದವರು ದೂರವಾಗಬಹುದು. ನಂಬಿದವರು ಮೋಸ ಮಾಡಬಹುದು. ಪರಿಶ್ರಮ ಪಟ್ಟರೂ ಫಲ ತಡವಾಗಬಹುದು. ಆದರೆ ಅದರಿಂದ ಬದುಕಿನ ಮೇಲಿನ ನಂಬಿಕೆ ಕಳೆದುಕೊಳ್ಳಬಾರದು. ಮಳೆ ಬರುವ ಮುನ್ನ ಆಕಾಶ ಕತ್ತಲಾಗುತ್ತದೆ. ಅದೇ ರೀತಿ ಉತ್ತಮ ದಿನಗಳ ಮುನ್ನ ಕಠಿಣ ಸಮಯಗಳು ಬರುತ್ತವೆ.
ಆದ್ದರಿಂದ, ಪ್ರತೀ ಬೆಳಗ್ಗೆಯೂ ಹೊಸ ಅವಕಾಶ ಎಂದು ನಂಬೋಣ. ಸಣ್ಣ ಗುರಿಗಳನ್ನಾದರೂ ನಿಶ್ಚಯಿಸಿ ಮುನ್ನಡೆಯೋಣ. ನಮ್ಮಿಂದ ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡೋಣ. ಏಕೆಂದರೆ, ಬದುಕು ಒಂದು ದಿನದಲ್ಲಿ ಬದಲಾಗುವುದಿಲ್ಲ. ಆದರೆ ಒಂದು ದಿನ ತೆಗೆದುಕೊಂಡ ಒಳ್ಳೆಯ ನಿರ್ಧಾರ ಬದುಕನ್ನೇ ಬದಲಾಯಿಸಬಹುದು.
– ಸೌಪರ್ಣಿಕಾ.