Saturday, May 30, 2026
HomeLocal Newsಸಹಕಾರ ವ್ಯವಸ್ಥೆ ಉಳಿದರಷ್ಟೇ ರೈತರ ಬದುಕಿಗೂ ಭದ್ರತೆ

ಸಹಕಾರ ವ್ಯವಸ್ಥೆ ಉಳಿದರಷ್ಟೇ ರೈತರ ಬದುಕಿಗೂ ಭದ್ರತೆ

ಯಲ್ಲಾಪುರ: ಗ್ರಾಮೀಣ ಭಾಗದ ಜನರ ಸಂಕಷ್ಟದ ದಿನಗಳಲ್ಲಿ ನೆರವಾಗುವ ಶಕ್ತಿಯಾಗಿ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಬೆಳವಣಿಗೆಯ ಹಿಂದೆ ಹಿರಿಯರ ದೂರದೃಷ್ಟಿ ಮತ್ತು ಪರಿಶ್ರಮ ಅಡಗಿದೆ ಎಂದು ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.

ಪಟ್ಟಣದ ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ(ಎಲ್‌ಎಸ್‌ಎಂಪಿ)ದ ವಜ್ರಮಹೋತ್ಸವ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಮುಖ್ಯ ಕಾರ್ಯನಿರ್ವಾಹಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ರೈತರು ಹಾಗೂ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದಾಗ ಸಹಕಾರಿ ಸಂಘಗಳು ಆರ್ಥಿಕ ಹಾಗೂ ನೈತಿಕ ಬೆಂಬಲ ನೀಡುತ್ತಾ ಬಂದಿವೆ. ಜಿಲ್ಲೆಯಲ್ಲಿ ರೈತರ ಬದುಕು ಆತ್ಮಹತ್ಯೆಯಂತಹ ದುರಂತಕ್ಕೆ ತಲುಪದಿರುವುದಕ್ಕೂ ಈ ಭಾಗದ ಬಲವಾದ ಸಹಕಾರಿ ವ್ಯವಸ್ಥೆಯೇ ಪ್ರಮುಖ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ನಾಗರಾಜ ಕವಡಿಕೆರೆ ವಹಿಸಿದ್ದರು. ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರಾದ ನಾರಾಯಣ ಭಟ್ಟ ಬಟ್ಲಗುಂಡಿ, ಉಮೇಶ ಭಾಗ್ವತ, ಸುಬ್ಬಣ್ಣ ಬೋಳ್ಮನೆ, ಎಸ್.ಕೆ. ಭಾಗ್ವತ, ಮುರಳಿ ಹೆಗಡೆ, ಟಿ.ವಿ. ಭಾಗ್ವತ, ಶೇಷಗಿರಿ ಭಟ್ಟ, ಮಹೇಶ ದೇಸಾಯಿ, ಉದ್ಯಮಿ ಬಾಲಕೃಷ್ಣ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘದ ಕಾನೂನು ಸಲಹೆಗಾರರಾದ ಎನ್.ಕೆ. ಭಾಗ್ವತ ಜೇನುಮೂಲೆ, ಜಿ.ವಿ. ಭಾಗ್ವತ ಕಾರಕುಂಕಿ ಹಾಗೂ ಲೆಕ್ಕಪರಿಶೋಧಕ ವಿಶ್ವೇಶ್ವರ ಗಾಂವಕರರನ್ನು ಗೌರವಿಸಲಾಯಿತು. ಸಂಘದ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು ಮತ್ತು ಮಾಜಿ ಮುಖ್ಯ ಕಾರ್ಯನಿರ್ವಾಹಕರನ್ನು ಸನ್ಮಾನಿಸಲಾಯಿತು.

ಎಲ್‌ಎಸ್‌ಎಂಪಿಯ ಮುಖ್ಯ ಕಾರ್ಯನಿರ್ವಾಹಕ ಎಂ.ಎಸ್. ಹೆಗಡೆ ಸ್ವಾಗತಿಸಿದರು. ಉಪಾಧ್ಯಕ್ಷ ಟಿ.ಆರ್. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಸುಬ್ಬಣ್ಣ ದಾನ್ಯಾನಕೊಪ್ಪ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Share