ಒಂದು ಊರಿನಲ್ಲಿ ಇಬ್ಬರು ಗೆಳೆಯರಿದ್ದರು. ಇಬ್ಬರಿಗೂ ಒಂದೇ ರೀತಿಯ ಬಡತನ, ಒಂದೇ ರೀತಿಯ ಕಷ್ಟ. ಮೊದಲನೆಯವನು ಪ್ರತಿದಿನ ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗುತ್ತಿದ್ದ. ಹೊಸದನ್ನು ಕಲಿಯುತ್ತಿದ್ದ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದ. ಎರಡನೆಯವನು ಮಾತ್ರ, “ಇರು ಮಗಾ… ನನಗೂ ಒಂದು ಒಳ್ಳೆಯ ಸಮಯ ಬರುತ್ತೆ. ಆಗ ನೋಡು, ನಾನು ಯಾರಂತ ತೋರಿಸ್ತೀನಿ” ಎಂದು ಹೇಳುತ್ತಲೇ ದಿನ ಕಳೆಯುತ್ತಿದ್ದ.
ವರ್ಷಗಳು ಕಳೆದವು. ಮೊದಲನೆಯವನ ಬದುಕು ನಿಧಾನವಾಗಿ ಬದಲಾಯಿತು. ಸಣ್ಣ ಯಶಸ್ಸುಗಳು ದೊಡ್ಡ ಯಶಸ್ಸುಗಳಾಗಿ ಮಾರ್ಪಟ್ಟವು. ಎರಡನೆಯವನು ಮಾತ್ರ ಇನ್ನೂ ಅದೇ ಜಾಗದಲ್ಲಿದ್ದ. ಒಂದು ದಿನ ಅವನು ಗೆಳೆಯನನ್ನು ಕೇಳಿದ, “ನಿನಗೆ ಅದೃಷ್ಟ ಕೈಹಿಡಿಯಿತು. ನನಗೆ ಯಾಕೆ ಕೈಕೊಟ್ಟಿತು?”
ಅದಕ್ಕೆ ಗೆಳೆಯ ನಕ್ಕು ಹೇಳಿದ, “ನಾನು ಅದೃಷ್ಟಕ್ಕಾಗಿ ಕಾಯಲಿಲ್ಲ. ಕೆಲಸ ಮಾಡುತ್ತಾ ಹೋದೆ. ಅದೃಷ್ಟವೇ ನನ್ನನ್ನು ಹುಡುಕಿಕೊಂಡು ಬಂತು.”
ಇದು ಕೇವಲ ಕಥೆಯಾದರೂ, ಜೀವನದ ಸತ್ಯ. ನಮ್ಮಲ್ಲಿ ಅನೇಕರು ಅದೃಷ್ಟವನ್ನು ನಂಬಿ, ತಮ್ಮ ಸಾಮರ್ಥ್ಯವನ್ನು ಮರೆತುಬಿಡುತ್ತಾರೆ. “ಒಂದು ದಿನ ನನ್ನ ಸಮಯ ಬರುತ್ತದೆ”, “ಅದೃಷ್ಟ ತಿರುಗಿದರೆ ಸಾಕು”, “ಯಾರಾದರೂ ಸಹಾಯ ಮಾಡಿದರೆ ಸಾಕು” ಎಂಬ ಭ್ರಮೆಯಲ್ಲಿ ವರ್ಷಗಳನ್ನು ಕಳೆಯುತ್ತಾರೆ. ಆದರೆ ಜೀವನದ ದೊಡ್ಡ ಸತ್ಯವೇನೆಂದರೆ, ಕಾಯುವವರಿಗೆ ಸಮಯ ಬರುವುದಿಲ್ಲ. ಪ್ರಯತ್ನಿಸುವವರಿಗೆ ಸಮಯವನ್ನು ಸೃಷ್ಟಿಸಿಕೊಳ್ಳುವ ಶಕ್ತಿ ಬರುತ್ತದೆ.
ಅದೃಷ್ಟ ಎನ್ನುವುದು ಆಕಾಶದಿಂದ ಬೀಳುವ ಉಡುಗೊರೆಯಲ್ಲ. ಅದು ಶ್ರಮ, ಪರಿಶ್ರಮ, ಸತತ ಪ್ರಯತ್ನ ಮತ್ತು ನಿರಂತರ ಕಲಿಕೆಯ ಫಲ. ಹೊರಗಿನಿಂದ ನೋಡುವವರಿಗೆ ಯಶಸ್ವಿಯಾದ ವ್ಯಕ್ತಿಯ ಬದುಕು ಅದೃಷ್ಟದ ಆಟದಂತೆ ಕಾಣಬಹುದು. ಆದರೆ ಆ ಯಶಸ್ಸಿನ ಹಿಂದೆ ಎಷ್ಟೋ ನಿದ್ದೆಯಿಲ್ಲದ ರಾತ್ರಿಗಳು, ಎಷ್ಟೋ ವೈಫಲ್ಯಗಳು, ಎಷ್ಟೋ ಕಠಿಣ ಪರಿಶ್ರಮ ಅಡಗಿರುತ್ತವೆ.
ಬೀಜವನ್ನು ನೆಡದೆ ಮರದ ನೆರಳನ್ನು ನಿರೀಕ್ಷಿಸುವುದು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ಶ್ರಮವಿಲ್ಲದೆ ಯಶಸ್ಸನ್ನು ನಿರೀಕ್ಷಿಸುವುದೂ ಸಾಧ್ಯವಿಲ್ಲ. ಅದೃಷ್ಟವು ಬಾಗಿಲು ತಟ್ಟಬಹುದು, ಆದರೆ ಬಾಗಿಲು ತೆರೆಯುವ ಧೈರ್ಯ ಮತ್ತು ಸಿದ್ಧತೆ ನಮ್ಮಲ್ಲಿರಬೇಕು. ಆ ಸಿದ್ಧತೆಯನ್ನು ಕೊಡುವುದು ನಮ್ಮ ಪರಿಶ್ರಮವೇ ಹೊರತು ಅದೃಷ್ಟವಲ್ಲ.
ಇತಿಹಾಸವನ್ನು ನೋಡಿದರೆ ಯಶಸ್ವಿಯಾದವರಲ್ಲಿ ಹೆಚ್ಚಿನವರು ಅದೃಷ್ಟದ ನಿರೀಕ್ಷೆಯಲ್ಲಿ ಕುಳಿತವರಲ್ಲ. ಅವರು ತಮ್ಮ ಪರಿಸ್ಥಿತಿಗಳನ್ನು ದೂಷಿಸಲಿಲ್ಲ. ಅವಕಾಶಕ್ಕಾಗಿ ಕಾಯಲಿಲ್ಲ. ಇದ್ದ ಅವಕಾಶವನ್ನೇ ದೊಡ್ಡದಾಗಿ ರೂಪಿಸಿದರು. ಪ್ರತಿಯೊಂದು ಸೋಲನ್ನೂ ಪಾಠವಾಗಿ ತೆಗೆದುಕೊಂಡರು. ಪ್ರತಿಯೊಂದು ಕಷ್ಟವನ್ನೂ ಮೆಟ್ಟಿಲಾಗಿಸಿಕೊಂಡರು.
ಆದ್ದರಿಂದ ಇಂದಿನಿಂದ ಒಂದು ನಿರ್ಧಾರ ಮಾಡೋಣ. “ನನ್ನ ಅದೃಷ್ಟ ಯಾವಾಗ ಬದಲಾಗುತ್ತದೆ?” ಎಂದು ಕೇಳುವುದನ್ನು ಬಿಟ್ಟು, “ನಾನು ಇಂದು ಏನು ಮಾಡಬಹುದು?” ಎಂದು ಕೇಳೋಣ. ಅದೃಷ್ಟದ ಬಗ್ಗೆ ಚಿಂತಿಸುವ ಸಮಯವನ್ನು ನಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಲು, ಹೊಸದನ್ನು ಕಲಿಯಲು ಮತ್ತು ಕೆಲಸ ಮಾಡಲು ಬಳಸೋಣ.
ನೆನಪಿರಲಿ, ಅದೃಷ್ಟ ಕೆಲವರಿಗೆ ಮಾತ್ರ ಸಿಗುವ ವಿಶೇಷ ಹಕ್ಕಲ್ಲ. ತನ್ನ ಮೇಲೆ ನಂಬಿಕೆ ಇಟ್ಟು ನಿರಂತರವಾಗಿ ಶ್ರಮಿಸುವ ಪ್ರತಿಯೊಬ್ಬರಿಗೂ ಅದು ಸಿಗುತ್ತದೆ. ಆದರೆ ಅದು ಬರುವುದಿಲ್ಲ, ನಿರ್ಮಿಸಿಕೊಳ್ಳಬೇಕು.
ಇಂದಿನ ಬೆಳಗು ನಿಮಗೆ ಒಂದು ಹೊಸ ಸಂದೇಶ ನೀಡಲಿ. ಅದೃಷ್ಟಕ್ಕಾಗಿ ಕಾಯಬೇಡಿ. ನಿಮ್ಮ ಸಾಮರ್ಥ್ಯವನ್ನು ನಂಬಿ. ನಿಮ್ಮ ಶ್ರಮವನ್ನು ನಂಬಿ. ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುವ ದಿನ ದೂರವಿಲ್ಲ!
–ಸೌಪರ್ಣಿಕಾ