ಸಿದ್ದಾಪುರ: ಸಾರ್ವಜನಿಕ ರಸ್ತೆಯಲ್ಲೇ ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಸಿದ್ದಾಪುರ ತಾಲೂಕಿನ ವಂದಾನೆ ಗ್ರಾಮದಲ್ಲಿ ನಡೆದಿದೆ.
ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಶಾಂತಿನಾಥ ಕೆ. ಪಾಸಾನೆ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಜೂನ್ 20ರಂದು ಮಧ್ಯಾಹ್ನ ಸುಮಾರು 12.15ರ ವೇಳೆಗೆ ವಂದಾನೆ ಗ್ರಾಮದ ಮಾಣಿಕ್ಯ ಹೋಟೆಲ್ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಮಂಜುನಾಥ ಸುಬ್ಬಾ ಗೌಡ (49), ಕಲಕೈ-ಲಂಬಾಪುರ ನಿವಾಸಿ, ಶಿರಸಿಯ ಉದಯ ಶೆಟ್ಟಿ ಎಂಬ ಬುಕ್ಕಿಯ ಸಹಾಯದಿಂದ ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಲಭಿಸಿತ್ತು.
ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು, ಸ್ಥಳದಲ್ಲೇ ಮಂಜುನಾಥನನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ₹1,950 ನಗದು, ಮಟ್ಕಾ ಅಂಕಿ ಬರೆದ ಚೀಟಿ, ಒಂದು ಬಾಲ್ ಪೆನ್ ಹಾಗೂ ಅಂಕೆ ಬರೆಯಲು ಬಳಸುತ್ತಿದ್ದ ಕಾಗದದ ಚೂರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಸಂಘಟಿತವಾಗಿ ಅಕ್ರಮ ಜೂಜಾಟ ನಡೆಸುತ್ತಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.