ಯಲ್ಲಾಪುರ: ತಾಲೂಕಿನ ಮಳಲಗಾಂವ ಸಮೀಪ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಜುಲೈ 7ರಂದು ಬೆಳಿಗ್ಗೆ 10.30ರ ಸುಮಾರಿಗೆ ಮಳಲಗಾಂವ ಗ್ರಾಮದ ನಿವಾಸಿ ಸಂತೋಷ ಜೋಜೆ ಫರ್ನಾಂಡಿಸ್ ತನ್ನ ಬೈಕ್ನಲ್ಲಿ ಅಕ್ಕ ಪಾರ್ವತಿ ಸತೀಶ ಆಗೇರ (51) ಅವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಮಳಲಗಾಂವದಿಂದ ಶಿರಸಿ ಕಡೆಗೆ ತೆರಳುತ್ತಿದ್ದರು.
ಈ ವೇಳೆ ಬೈಕ್ ಅತೀವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿದ ಪರಿಣಾಮ ಮಳಲಗಾಂವ ಬಸ್ ನಿಲ್ದಾಣದ ಸಮೀಪದ ಸಿಮೆಂಟ್ ರಸ್ತೆಯಲ್ಲಿ ಸ್ಕಿಡ್ ಆಗಿ ಅಪಘಾತ ಸಂಭವಿಸಿತ್ತು.
ಅಪಘಾತದಲ್ಲಿ ಪಾರ್ವತಿ ಅವರ ತಲೆಯ ಹಿಂಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಮೂಗು ಮತ್ತು ಕಿವಿಯಿಂದ ರಕ್ತಸ್ರಾವ ಉಂಟಾಗಿತ್ತು. ಮೊದಲಿಗೆ ಯಲ್ಲಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಶೇಕ್ಯುರ್ ಆಸ್ಪತ್ರೆಗೆ ಹಾಗೂ ನಂತರ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜುಲೈ 9ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಪಾರ್ವತಿ ಅವರು ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.