ಯಲ್ಲಾಪುರ/ಶಿರಸಿ: ತಾಲೂಕಿನ ಆರತಿಬೈಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಧಾರವಾಡ ಮೂಲದ ಏಳು ಮಂದಿ ಮೃತಪಟ್ಟಿರುವ ಘಟನೆಗೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತ ಶೋಕ ಸಂದೇಶದಲ್ಲಿ, ಹೊತ್ತಿನ ತುತ್ತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದ, ಜೀವನದ ಜಂಜಾಟಗಳ ನಡುವೆ ಕೊಂಚ ನಿರಾಳತೆ ಬಯಸಿ ಪ್ರವಾಸಕ್ಕೆ ಹೊರಟಿದ್ದ ಧಾರವಾಡ ಮೂಲದ ಸ್ನೇಹಿತರ ತಂಡ ಈ ಭೀಕರ ಅಪಘಾತಕ್ಕೆ ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ಬದುಕಿನ ನೂರಾರು ಕನಸುಗಳನ್ನು ಹೊತ್ತು ಹೊರಟಿದ್ದ ಅಮಾಯಕ ಜೀವಗಳು ಅರ್ಧ ಹಾದಿಯಲ್ಲೇ ಮಸಣ ಸೇರಿರುವುದು ವಿಧಿಯ ಕ್ರೂರ ಆಟವಾಗಿದೆ. ತಮ್ಮ ಆಧಾರಸ್ತಂಭಗಳನ್ನೇ ಕಳೆದುಕೊಂಡು ಕಣ್ಣೀರಿನ ಕಡಲಿನಲ್ಲಿ ಮುಳುಗಿರುವ ಕುಟುಂಬಸ್ಥರ ಆಕ್ರಂದನ ಹೇಳತೀರದಾಗಿದೆ ಎಂದು ಅವರು ಕಂಬನಿ ಮಿಡಿದಿದ್ದಾರೆ.
ಅಗಲಿದವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಈ ಅಸಹನೀಯ ದುಃಖವನ್ನು ಭರಿಸುವ ಶಕ್ತಿಯನ್ನು ಮೃತರ ಕುಟುಂಬದವರಿಗೆ ಕರುಣಿಸಲಿ ಎಂದು ಸಂಸದ ಕಾಗೇರಿ ಪ್ರಾರ್ಥಿಸಿದ್ದಾರೆ.