ಒಂದು ಮರ ಬೆಳೆದು ಹೆಮ್ಮರವಾಗಲು ಕೆಲವೊಮ್ಮೆ 30, 40, 50 ವರ್ಷಗಳೇ ಬೇಕಾಗುತ್ತದೆ. ಆದರೆ ಅದೇ ಮರದ ಕಾಂಡಕ್ಕೆ ಕೇವಲ ಒಂದೇ ನಿಮಿಷದಲ್ಲಿ ಒಂದು ಮೊಳೆ ಹೊಡೆಯಬಹುದು. ಪ್ರಶ್ನೆ ಏನೆಂದರೆ, ಕಾಡನ್ನು ಉಳಿಸುವ ಜವಾಬ್ದಾರಿ ಹೊತ್ತಿರುವ ವ್ಯವಸ್ಥೆಯೇ ಕಾಡಿನ ಜೀವವಾದ ಮರಕ್ಕೆ ಗಾಯ ಮಾಡುವಂತಾದರೆ ಅದನ್ನು ಸಂರಕ್ಷಣೆ ಎನ್ನಬೇಕೇ?
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಅರಣ್ಯ ಪ್ರದೇಶದಲ್ಲಿ ಜೀವಂತ ಮರಗಳಿಗೆ ಕಬ್ಬಿಣದ ಮೊಳೆ ಹೊಡೆದು, ಅವುಗಳನ್ನೇ ಕಂಬಗಳಂತೆ ಬಳಸಿಕೊಂಡು ಮುಳ್ಳುತಂತಿಯ ಬೇಲಿ ನಿರ್ಮಿಸಿರುವ ದೃಶ್ಯ ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಅರಣ್ಯವನ್ನು ರಕ್ಷಿಸುವ ಉದ್ದೇಶ ಶ್ಲಾಘನೀಯವೇ. ಆದರೆ ಆ ರಕ್ಷಣೆಯ ಮಾರ್ಗವೇ ಮರಗಳಿಗೆ ಹಾನಿಯಾಗುವಂತಿದ್ದರೆ, ಅದರ ಬಗ್ಗೆ ಮರುಚಿಂತನೆ ಅಗತ್ಯವಿಲ್ಲವೇ ಎಂಬ ಪ್ರಶ್ನೆ ಎದ್ದಿದೆ.
ಮನುಷ್ಯನ ಚರ್ಮ ಹೇಗೆ ದೇಹವನ್ನು ಕಾಪಾಡುತ್ತದೆಯೋ, ಅದೇ ರೀತಿ ತೊಗಟೆ ಮರವನ್ನು ಕೀಟ, ಶಿಲೀಂಧ್ರ ಹಾಗೂ ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ. ಆ ತೊಗಟೆಯನ್ನು ಮೊಳೆ ಹೊಡೆದು ಛಿದ್ರಗೊಳಿಸಿದಾಗ, ಮರ ತನ್ನ ಸಹಜ ರಕ್ಷಣಾ ವ್ಯವಸ್ಥೆಯ ಒಂದು ಭಾಗವನ್ನು ಕಳೆದುಕೊಳ್ಳುತ್ತದೆ. ಗಾಯದ ಮೂಲಕ ಕೀಟಗಳು, ಶಿಲೀಂಧ್ರಗಳು ಹಾಗೂ ರೋಗಾಣುಗಳು ಒಳನುಗ್ಗುವ ಸಾಧ್ಯತೆ ಹೆಚ್ಚುತ್ತದೆ. ಮರ ಕೂಡ ತನ್ನ ಗಾಯವನ್ನು ಗುಣಪಡಿಸಿಕೊಳ್ಳಲು ಹೆಚ್ಚುವರಿ ಶಕ್ತಿಯನ್ನು ಬಳಸಬೇಕಾಗುತ್ತದೆ.
ಒಂದು ಮೊಳೆ ಹೊಡೆದರೆ ಮರ ತಕ್ಷಣ ಒಣಗಿ ಹೋಗುವುದಿಲ್ಲ ಎಂಬುದು ನಿಜ. ಆದರೆ, ಪರಿಸರ ವಿಜ್ಞಾನದಲ್ಲಿ “ಮರ ಬದುಕಿತು ಎಂದರೆ ಅದು ಹಾನಿಗೊಳಗಾಗಿಲ್ಲ ಎಂದಲ್ಲ” ಎಂಬ ಮಾತಿದೆ. ಮನುಷ್ಯನ ದೇಹದಲ್ಲಿ ಸಣ್ಣ ಗಾಯವೂ ಕಲೆ ಬಿಟ್ಟು ಹೋಗುವಂತೆ, ಮರದ ಗಾಯವೂ ಅದರ ಬೆಳವಣಿಗೆ, ಆರೋಗ್ಯ ಹಾಗೂ ಆಯುಷ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು.
ಇನ್ನೊಂದು ಪ್ರಶ್ನೆ ಬೇಲಿಯ ಬಾಳಿಕೆಯದ್ದು. ಮರದ ಕಾಂಡದಲ್ಲಿ ಸಹಜವಾಗಿಯೇ ತೇವಾಂಶ ಇರುತ್ತದೆ. ಮಳೆಗಾಲದಲ್ಲಿ ಅದು ಇನ್ನಷ್ಟು ಹೆಚ್ಚಾಗುತ್ತದೆ. ಇಂತಹ ತೇವಾಂಶದ ಸಂಪರ್ಕದಲ್ಲಿ ನಿರಂತರ ಇರುವ ಕಬ್ಬಿಣದ ಮುಳ್ಳುತಂತಿ ತುಕ್ಕು ಹಿಡಿಯುವ ಸಾಧ್ಯತೆ ಹೆಚ್ಚು. ಅಂದರೆ ಮರಕ್ಕೂ ಹಾನಿ, ಬೇಲಿಯ ಬಾಳಿಕೆಯನ್ನೂ ಕುಗ್ಗಿಸುತ್ತದೆ. ಹಾಗಿದ್ದಾಗ, ಈ ವಿಧಾನ ಎಷ್ಟು ಪರಿಣಾಮಕಾರಿ ಎಂಬ ಪ್ರಶ್ನೆಯೂ ಎದ್ದಿದೆ.
ವಿಶ್ವದ ಹಲವು ದೇಶಗಳಲ್ಲಿ ಹಾಗೂ ಭಾರತದಲ್ಲಿಯೂ ಆಧುನಿಕ ಅರಣ್ಯ ನಿರ್ವಹಣೆಯಲ್ಲಿ ಜೀವಂತ ಮರಗಳನ್ನು ಕಂಬಗಳಂತೆ ಬಳಸುವುದನ್ನು ಸಾಧ್ಯವಾದಷ್ಟು ತಪ್ಪಿಸಲಾಗುತ್ತಿದೆ. ಅದರ ಬದಲಿಗೆ RCC ಕಂಬಗಳು, ಗ್ಯಾಲ್ವನೈಸ್ಡ್ ಉಕ್ಕಿನ ಕಂಬಗಳು, ಕಾಂಕ್ರೀಟ್ ಕಂಬಗಳು ಅಥವಾ ಮರಕ್ಕೆ ಯಾವುದೇ ಹಾನಿಯಾಗದ ವಿಶೇಷ ಕ್ಲ್ಯಾಂಪ್ ಹಾಗೂ ಸ್ಟ್ರ್ಯಾಪ್ ವ್ಯವಸ್ಥೆಗಳನ್ನು ಬಳಸುವ ಪದ್ಧತಿ ಹೆಚ್ಚುತ್ತಿದೆ. ಇದರಿಂದ ಬೇಲಿಯೂ ಗಟ್ಟಿಯಾಗಿರುತ್ತದೆ, ಮರಕ್ಕೂ ಯಾವುದೇ ಗಾಯವಾಗುವುದಿಲ್ಲ.
ಅರಣ್ಯ ಸಂರಕ್ಷಣೆ ಎಂದರೆ ಕೇವಲ ಅತಿಕ್ರಮಣ ತಡೆಯುವುದು ಅಥವಾ ಗಡಿ ಗುರುತಿಸುವಂತೆಯೇ ಕಾಡಿನ ಪ್ರತಿಯೊಂದು ಜೀವಂತ ಮರವನ್ನು ಗೌರವದಿಂದ ಕಾಪಾಡುವುದೂ ಅದರಷ್ಟೇ ಮುಖ್ಯ. ವಿಶೇಷವಾಗಿ ಉತ್ತರ ಕನ್ನಡದಂತಹ ಜೀವವೈವಿಧ್ಯದ ಹಾಟ್ಸ್ಪಾಟ್ ಪ್ರದೇಶದಲ್ಲಿ ಪ್ರತಿಯೊಂದು ಹೆಮ್ಮರವೂ ಸಾವಿರಾರು ಪಕ್ಷಿಗಳು, ಕೀಟಗಳು ಸೇರಿದಂತೆ ಇತರ ಜೀವಿಗಳಿಗೆ ಆಶ್ರಯವಾಗಿದೆ. ಅಂತಹ ಮರಗಳನ್ನು ಕೇವಲ “ಕಂಬ”ಗಳಾಗಿ ನೋಡುವ ಮನೋಭಾವದಿಂದ ಹೊರಬರಬೇಕಾದ ಅಗತ್ಯವಿದೆ.
ಇಲ್ಲಿ ಯಾರನ್ನೂ ದೂಷಿಸುವ ಉದ್ದೇಶವಿಲ್ಲ. ಅರಣ್ಯ ಇಲಾಖೆ ಕಾಡನ್ನು ಉಳಿಸಲು ಅಪಾರ ಶ್ರಮವಹಿಸುತ್ತಿರುವುದು ಸತ್ಯ. ಆದರೆ ಕಾಲ ಬದಲಾಗುತ್ತಿದೆ. ಪರಿಸರ ವಿಜ್ಞಾನವೂ ಹೊಸ ಪರಿಹಾರಗಳನ್ನು ಸೂಚಿಸುತ್ತಿದೆ. ಹೀಗಿರುವಾಗ, ಜೀವಂತ ಮರಗಳಿಗೆ ಮೊಳೆ ಹೊಡೆದು ಬೇಲಿ ಕಟ್ಟುವಂತಹ ಪದ್ಧತಿಯನ್ನು ಮುಂದುವರಿಸುವ ಬದಲು, ಮರಕ್ಕೂ ನೋವಾಗದ, ಪರಿಸರಕ್ಕೂ ಪೂರಕವಾಗಿರುವ ಪರ್ಯಾಯ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಇಲಾಖೆ ಗಂಭೀರವಾಗಿ ಚಿಂತನೆ ನಡೆಸುವ ಸಮಯ ಬಂದಿದೆ.