ಬೆಲೆಕೇರಿಯಲ್ಲಿ ಮೂರು ಮೀನುಗಾರಿಕಾ ದೋಣಿಗಳಿಗೆ ಹಾನಿ; ಲಕ್ಷಾಂತರ ರೂಪಾಯಿ ನಷ್ಟ
ಅಂಕೋಲಾ: ಇಲ್ಲಿನ ಬೆಲೆಕೇರಿ ಸಮೀಪದ ಸಂಗಮನಾಳದಲ್ಲಿ ಸಮುದ್ರದ ಪ್ರಬಲ ಸೆಳೆತಕ್ಕೆ ಸಿಲುಕಿ ಮೂರು ಮೀನುಗಾರಿಕಾ ದೋಣಿಗಳು ಮುಳುಗಿದ ಘಟನೆ ನಡೆದಿದ್ದು, ಈ ಘಟನೆಯಿಂದ ದೋಣಿ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಮುಳುಗಿದ ದೋಣಿಗಳು ಶ್ರೀಪಾದ್ ಬನವಾಳೀಕರ, ರಾಮಚಂದ್ರ ಕುಡತಳ್ಕರ್ ಹಾಗೂ ನಿಲೇಶ್ ಜಾಂಬಳೇಕರ್ ಅವರಿಗೆ ಸೇರಿದ್ದಾಗಿವೆ. ಸಮುದ್ರದ ಸೆಳೆತದಿಂದ ದೋಣಿಗಳು ಕೊಚ್ಚಿಕೊಂಡು ಹೋಗಿದ್ದು, ಅವುಗಳಲ್ಲಿದ್ದ ಮೀನುಗಾರಿಕಾ ಬಲೆ, ಎಂಜಿನ್ ಹಾಗೂ ಇತರೆ ಉಪಕರಣಗಳು ಹಾನಿಗೊಳಗಾಗಿವೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳೀಯ ಮೀನುಗಾರರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಹಗ್ಗಗಳ ಸಹಾಯದಿಂದ ಹಲವು ಗಂಟೆಗಳ ಕಾಲ ಶ್ರಮಪಟ್ಟು ಮುಳುಗಿದ್ದ ಮೂರು ದೋಣಿಗಳನ್ನೂ ತೀರಕ್ಕೆ ಎಳೆದು ತಂದರು.
ಈ ಘಟನೆಯಿಂದ ಮೀನುಗಾರರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದ್ದು, ಹಾನಿಗೊಳಗಾದ ದೋಣಿ ಮಾಲೀಕರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಮತ್ತು ಆರ್ಥಿಕ ನೆರವು ನೀಡಬೇಕು ಎಂದು ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ.