ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಆಕಳು ಕಳ್ಳತನ ಪ್ರಕರಣವನ್ನು ಭೇದಿಸಿರುವ ಬನವಾಸಿ ಪೊಲೀಸರು, ಅಂತರ ಜಿಲ್ಲಾ ದನ ಕಳ್ಳರಿಬ್ಬರನ್ನು ಬಂಧಿಸಿ, ಕಳ್ಳತನಕ್ಕೆ ಬಳಸಿದ್ದ ಸುಮಾರು ₹2 ಲಕ್ಷ ಮೌಲ್ಯದ ಟಾಟಾ ಇಂಟ್ರಾ (KA-17-AA-7082) ವಾಹನವನ್ನು ಜಪ್ತಿ ಮಾಡಿದ್ದಾರೆ.
2026ರ ಮೇ 23ರಂದು ಬನವಾಸಿ ನಿವಾಸಿಯೊಬ್ಬರು ತಮ್ಮ ಕಪ್ಪು ಬಣ್ಣದ ಆಕಳನ್ನು ಮೇ 20ರ ರಾತ್ರಿ 11 ಗಂಟೆಯಿಂದ ಮೇ 21ರ ಬೆಳಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಮುಂಭಾಗದ ರಸ್ತೆಯ ಪಕ್ಕದಿಂದ ಕಳ್ಳತನ ಮಾಡಲಾಗಿದೆ ಎಂದು ದೂರು ನೀಡಿದ್ದರು. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿ, ತನಿಖೆಯ ವೇಳೆ ಮಹಮ್ಮದ್ ಇಸ್ಮಾಯಿಲ್ (20), ಹೊನ್ನೆಬಾಗಿ, ಚನ್ನಗಿರಿ, ದಾವಣಗೆರೆ ಹಾಗೂ ಮಹಮ್ಮದ್ ವಾಸೀಂ (26), ಅಡಿಕೆ ವ್ಯಾಪಾರಿ, ಕಾಗೆಕೋಡಮಗ್ಗಿ, ಭದ್ರಾವತಿ, ಶಿವಮೊಗ್ಗ ಎಂಬಿಬ್ಬರನ್ನು ಜುಲೈ 16ರಂದು ಬಂಧಿಸಿದ್ದಾರೆ.
ಬಂಧಿತರಿಂದ ಕಳ್ಳತನಕ್ಕೆ ಬಳಸಿದ್ದ ಟಾಟಾ ಇಂಟ್ರಾ ವಾಹನ (KA-17-AA-7082) ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎನ್.ಎಂ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಶಿರಸಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ್ ಹಾಗೂ ಶಿರಸಿ ವೃತ್ತದ ಸಿಪಿಐ ಈ.ಸಿ. ಸಂಪತ್ ಅವರ ಮಾರ್ಗದರ್ಶನದಲ್ಲಿ ನಡೆಯಿತು.
ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐ (ಕಾನೂನು ಮತ್ತು ಸುವ್ಯವಸ್ಥೆ) ಮಹಾಂತಪ್ಪ ಜಿ. ಕುಂಬಾರ ಹಾಗೂ ಪಿಎಸ್ಐ (ತನಿಖೆ) ರವೀಂದ್ರ ಬಿರಾದರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ ಎಎಸ್ಐ ಮಣಿಮಲನ್ ಕೆ. ಮೇಸ್ತ್ರಿ, ಸಿಬ್ಬಂದಿಗಳಾದ ಅಬ್ದುಲ್ ಸಮ್ಮದ್ ಅನ್ಸಾರಿ, ಬಸವರಾಜ್ ಜಾಡರ್, ಮಂಜಪ್ಪ ಪಿ., ರಾಜೇಶ್ ಪಿ.ಎಂ. ಹಾಗೂ ಜಗದೀಶ್ ಕೆ. ಭಾಗವಹಿಸಿದ್ದರು.
ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿದೆ.